ನವದೆಹಲಿ, ಜ 13 (DaijiworldNews/DB): ಸರ್ಕಾರದೊಂದಿಗೆ ಸೈದ್ದಾಂತಿಕ ಸಂಘರ್ಷದಲ್ಲಿ ತೊಡಗಿರುವ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರಿಗೆ ಆ ರೀತಿ ಮಾಡದಂತೆ ಸಲಹೆ ಮಾಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಒತ್ತಾಯಿಸಿದ್ದಾರೆ.
ಕಾನೂನು ಸಚಿವ ಎಸ್. ರಘುಪತಿ ಅವರ ನೇತೃತ್ವದ ನಿಯೋಗವು ರಾಷ್ಟ್ರಪತಿಯವರನ್ನು ಗುರುವಾರ ನವದೆಹಲಿಯಲ್ಲಿ ಭೇಟಿಯಾಗಿ ಸಿಎಂ ಬರೆದ ಪತ್ರವನ್ನು ಹಸ್ತಾಂತರಿಸಿತು. ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸಂಪುಟದ ನಿರ್ದೇಶನಗಳನ್ನು ಪಾಲಿಸುವುದರೊಂದಿಗೆ ಸೈದ್ದಾಂತಿಕ ಸಂಘರ್ಷವನ್ನು ಸರ್ಕಾರದೊಂದಿಗೆ ಇಟ್ಟುಕೊಳ್ಳದಂತೆ ರಾಜ್ಯಪಾಲರಿಗೆ ನಿರ್ದೇಶಿಸಬೇಕು ಎಂದು ಸಿಎಂ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಜನವರಿ 9ರಂದು ವರ್ಷದ ಮೊದಲ ಅಧಿವೇಶನ ನಡೆದಿದ್ದು, ಸರ್ಕಾರ ನೀಡಿದ ಭಾಷಣದ ಕೆಲವು ಭಾಗಗಳನ್ನು ರಾಜ್ಯಪಾಲರು ಓದದೇ ನಿರಾಕರಣೆ ಮಾಡಿದ್ದಾರೆ. ಅಲ್ಲದೆ ತಮ್ಮದೇ ಮಾತುಗಳನ್ನು ಭಾಷಣದಲ್ಲಿ ಸೇರಿಸಿದ್ದಾರೆ. ಸದನದ ಸಂಪ್ರದಾಯಗಳಿಗೆ ವಿರುದ್ದವಾದ ನಡೆಯನ್ನು ಅವರು ಅನುಸರಿಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಉನ್ನತವಾದ ರಾಜ್ಯಪಾಲರ ಕಚೇರಿಗೆ ನೀಡಬೇಕಾದ ಎಲ್ಲಾ ಗೌರವವನ್ನು ಸರ್ಕಾರ ನೀಡುತ್ತಿದೆ. ರಾಜಕೀಯ ಮೀರಿದವರು ರಾಜ್ಯಪಾಲರು. ಹೀಗಿರುವಾಗ ಸರ್ಕಾರದೊಂದಿಗೆ ಸೈದ್ದಾಂತಿಕ ಸಂಘರ್ಷಕ್ಕಿಳಿಯುವುದು ಸರಿಯಲ್ಲ ಎಂದೂ ಹೇಳಿದ್ದಾರೆ.
ಸಮಾನತೆಯ ರಾಜಕಾರಣವನ್ನು ವಿರೋಧಿಸುವ ಅವರು, ತಮಿಳು ಸಂಸ್ಕೃತಿ, ಸಾಹಿತ್ಯ, ಸಾಮಾಜಿಕ ವ್ಯವಸ್ಥೆಯನ್ನೂ ವಿರೋಧಿಸಿ ಮಾತನಾಡುತ್ತಾರೆ ಎಂದು ಸ್ಟಾಲಿನ್ ದೂರಿದ್ದಾರೆ.