ಮಡಿಕೇರಿ, ಜ 13 (DaijiworldNews/DB): ತಾಯಿಯ ತಲೆಯು ಆಕಸ್ಮಿಕವಾಗಿ ಕಾರ್ಯಸ್ಥಿತಿಯಲ್ಲಿದ್ದ ಹಿಟ್ಟಿನ ಗಿರಣಿ ಬೆಲ್ಗೆ ಸಿಲುಕಿಕೊಂಡಾಗ ಸಮಯಪ್ರಜ್ಞೆ ಮೆರೆದು ತಾಯಿಯ ಪ್ರಾಣ ಕಾಪಾಡಿದ 9ರ ಹರೆಯದ ದೀಕ್ಷಿತ್ ಎಂಬ ಬಾಲಕ ಈ ಬಾರಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಬಾಲಕ ದೀಕ್ಷಿತ್ ಅವರ ತಾಯಿ ಅರ್ಪಿತಾ ಅವರು ಕೂಡೂರು ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ಅಕ್ಕಿ ಪುಡಿ ಮಾಡಿಸುತ್ತಿದ್ದ ಸಂದರ್ಭ ಅವರ ತಲೆ ಆಕಸ್ಮಿಕವಾಗಿ ಗಿರಣಿಯ ಬೆಲ್ಗೆ ಸಿಲುಕಿಕೊಂಡಿದೆ. ಕೂಡಲೇ ಅವರು ಜೋರಾಗಿ ಕಿರುಚಿಕೊಂಡಿದ್ದಾರೆ. ಅಲ್ಲೇ ಆಟವಾಡುತ್ತಿದ್ದ ಬಾಲಕ ದೀಕ್ಷಿತ್ಗೆ ತಾಯಿಯ ಕೂಗು ಕೇಳಿ ಓಡಿ ಬಂದಿದ್ದಾರೆ. ಈ ವೇಳೆ ಅಪಾಯ ಅರಿತ ದೀಕ್ಷಿತ್ ಗಿರಣಿಗೆ ವಿದ್ಯುತ್ ಸರಬರಾಜಾಗುವ ಸ್ವಿಚ್ನ್ನು ಆಫ್ ಮಾಡಿದ್ದಾರೆ. ಬಾಲಕನ ಸಮಯಪ್ರಜ್ಞೆಯಿಂದಾಗಿ ತಾಯಿಯ ಪ್ರಾಣ ಉಳಿದಿತ್ತು.
ಬಾಲಕನ ಈ ಕೆಲಸಕ್ಕೆ ಆತನನ್ನು 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ. ದೀಕ್ಷಿತ್ ಕೂಡೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿ.