ಬೆಂಗಳೂರು, ಜ 12 (DaijiworldNews/SM): ಒಕ್ಕಲಿಗ ಹಾಗೂ ಲಿಂಗಾಯತ ಪಂಚಮಸಾಲಿಗೆ ರಾಜ್ಯ ಸರ್ಕಾರ ನೀಡಿರುವ 2 ಸಿ, 2 ಡಿ ಮೀಸಲಾತಿಗೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ಒಕ್ಕಲಿಗ ಮತ್ತು ಲಿಂಗಾಯತ ಪಂಚಮಸಾಲಿಗೆ ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಇಂದು(ಜನವರಿ 12) ಹೈಕೋರ್ಟ್ ಸೂಚಿಸಿ ಆದೇಶ ಹೊರಡಿಸಿದೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಂತೆ ರಾಘವೇಂದ್ರ ಡಿ.ಜಿ.ಎನ್ನುವರು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದ್ದು, ಹೊಸ ಮೀಸಲಾತಿಗೆ ತಡೆ ಕೋರಿ ಮನವಿ ಮಾಡಿದರು. ಬಳಿಕ ಕೋರ್ಟ್, ಕಾಲಾವಕಾಶದ ಕೊರತೆ ಹಿನ್ನೆಲೆಯಲ್ಲಿ ವಿಚಾರಣೆ ಜ.30 ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ.
ಕರ್ನಾಟಕದಲ್ಲಿ ಎರಡು ಪ್ರಬಲ ಸಮುದಾಯದವಾಗಿರುವ ಒಕ್ಕಲಿಗ ಹಾಗೂ ಲಿಂಗಾಯತ ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2ಸಿ ಹಾಗೂ 2ಡಿ ಎಂದು ಎರಡು ಪ್ರತ್ಯೇಕ ಕೆಟಗರಿ ಮಾಡಿತ್ತು. 3Aನಲ್ಲಿದ್ದ ಒಕ್ಕಲಿಗರಿಗೆ ಹೊಸದಾಗಿ 2C ಕೆಟಗರಿ ಹಾಗೂ 3Bನಲ್ಲಿದ್ದ ಲಿಂಗಾಯತರಿಗೆ 2D ಕೆಟಗರಿ ರಚಿಸಲು ಡಿಸೆಂಬರ್ 29 ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿತ್ತು.
ಹೊಸದಾಗಿ 2ಸಿ ಹಾಗೂ 2ಡಿ ಕೆಟಗರಿ ಸೃಷ್ಟಿಸುವ ಬಗ್ಗೆಯೂ ಹಲವು ಗೊಂದಲಗಳ ಗೂಡಾಗಿದೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯ ತಮಗೆ ಸರ್ಕಾರ ನೀಡಿದ್ದ 2D ಕೆಟಗರಿಯನ್ನು ತಿರಸ್ಕರಿಸಿದ್ದು, 2A ಮೀಸಲಾತಿ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದೆ.