ನವದೆಹಲಿ, ಜ 12 (DaijiworldNews/DB): ವಿವಾದಾತ್ಮಕ ಹೇಳಿ ವ್ಯಾಪಕ ಆಕ್ರೋಶ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ಇದೀಗ ತಮಗೆ ಜೀವ ಬೆದರಿಕೆಯಿದೆ ಎಂಬ ಕಾರಣವೊಡ್ಡಿ ಗನ್ ಲೈಸೆನ್ಸ್ ಪಡೆದುಕೊಂಡಿದ್ದಾರೆ.
ನೂಪುರ್ ಶರ್ಮಾ ಅವರು ತಮಗೆ ಜೀವ ಬೆದರಿಕೆ ಇದೆ, ಹೀಗಾಗಿ ಗನ್ ಲೈಸೆನ್ಸ್ ಅಗತ್ಯವಿದೆ ಎಂದು ಇತ್ತೀಚೆಗೆ ದೆಹಲಿ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಜೀವಕ್ಕೆ ಅಪಾಯ ಇರುವುದರಿಂದ ದಿನದ 24 ಗಂಟೆಯೂ ಗನ್ ಅಗತ್ಯವಿದೆ ಎಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಗನ್ ಪರವಾನಗಿ ಘಟಕವು ಆತ್ಮರಕ್ಷಣೆಗಾಗಿ ನೂಪುರ್ ಶರ್ಮಾ ಅವರಿಗೆ ಗನ್ ಲೈಸೆನ್ಸ್ ನೀಡಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಟಿವಿಯೊಂದರ ಚರ್ಚೆ ವೇಳೆ ಕಳೆದ ವರ್ಷ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಅಲ್ಲಲ್ಲಿ ಪ್ರತಿಭಟನೆಗಳು ನಡೆದು ಹಿಂಸಾತ್ಮಕ ರೂಪವನ್ನು ಪಡೆದುಕೊಂಡಿತ್ತು. ಘಟನೆ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದ ವಕ್ತಾರ ಸ್ಥಾನದಿಂದ ವಜಾಗೊಳಿಸಿತ್ತು.