ನವದೆಹಲಿ, ಜ 12 (DaijiworldNews/DB): ಇಡೀ ಜಗತ್ತು ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. 21ನೇ ಶತಮಾನದಲ್ಲಿ ಜಾಗತಿಕ ಅಭಿವೃದ್ದಿ ಆಗುವುದು ದಕ್ಷಿಣದ ರಾಷ್ಟ್ರಗಳಿಂದಲೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಕಿಟ್ 2023ಯಲ್ಲಿ ಮಾತಮಾಡಿದ ಅವರು, ಜಗತ್ತಿನ ಬಿಕ್ಕಟ್ಟಿನ ಪರಿಸ್ಥಿತಿ ಎಲ್ಲಿಯವರೆಗೆ ಮುಂದುವರಿಯಲಿದೆ ಎನ್ನುವುದು ಅಸಾಧ್ಯ. ಆದರೆ ನಮ್ಮ ಸಮಯ ಈಗ ಆರಂಭವಾಗುತ್ತಿದೆ. ಜಾಗತಿಕ ಅಭಿವೃದ್ದಿಯತ್ತ ದಾಪುಗಾಲಿಡುವ ಹೊತ್ತಿದು ಎಂದರು.
ದಕ್ಷಿಣದ ದೇಶಗಳ ವಾಸಿಗಳ ಸಂಖ್ಯೆ ಜಗತ್ತಿನ ಒಟ್ಟು ಜನಸಂಖ್ಯೆಯ ನಾಲ್ಕನೇ ಮೂರರಷ್ಟಿದೆ. ಎಂಟು ದಶಕಗಳ ಹಿಂದಿನ ಜಾಗತಿಕ ಆಡಳಿತದ ರೀತಿ ಬದಲಾವಣೆ ಹಾದಿಯಲ್ಲಿ ಸಾಗುತ್ತಿದ್ದಂತೆ ಹೊಸ ಕ್ರಮಗಳನ್ನು ರೂಪಿಸಲು ನಾವು ತಯಾರಾಗಬೇಕು ಎಂದವರು ಈ ವೇಳೆ ಪ್ರತಿಪಾದಿಸಿದರು.
ಜಾಗತಿಕ ಬಿಕ್ಕಟ್ಟು ಸೃಷ್ಟಿಯಲ್ಲಿ ದಕ್ಷಿಣದ ರಾಷ್ಟ್ರಗಳ ಪಾಲಿಲ್ಲ. ಆದರೆ ಸೃಷ್ಟಿಯಾದ ಬಿಕ್ಕಟ್ಟಿನ ಪರಿಣಾಮ ನಮ್ಮ ಮೇಲೂ ಆಗುತ್ತದೆ. ಕೋವಿಡ್, ಹವಾಮಾನ ಬದಲಾವಣೆ, ಭಯೋತ್ಪಾದನೆ, ರಷ್ಯಾ-ಉಕ್ರೇನ್ ಯುದ್ದ ಮುಂತಾದವು ನಮ್ಮ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿದೆ. ಹಾಗಾಗಿ ಪರಿಹಾರಗಳ ಹುಡುಕಾಟ ಅಗತ್ಯವೂ ಆಗಿದೆ ಎಂದು ಅಭಿಪ್ರಾಯಪಟ್ಟರು.