ಅಯೋಧ್ಯೆ, ಜ.12 (DaijiworldNews/HR): ಪವಿತ್ರ ಗ್ರಂಥ ರಾಮ ಚರಿತ ಮಾನಸವು ಸಮಾಜದಲ್ಲಿ ದ್ವೇಷ ಮತ್ತು ಒಡಕು ಮೂಡಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ನಾಲಿಗೆಯನ್ನು ಕತ್ತರಿಸುವ ಯಾರಿಗಾದರೂ ನಾನು 10 ಕೋಟಿ ರೂಪಾಯಿ ಬಹುಮಾನ ಘೋಷಿಸುತ್ತೇನೆ ಎಂದು ಅಯೋಧ್ಯೆ ಧರ್ಮಗುರು ಜಗದ್ಗುರು ಪರಮಹಂಸ ಆಚಾರ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಬಿಹಾರದ ಶಿಕ್ಷಣ ಸಚಿವರು ರಾಮಚರಿತ ಮಾನಸ ಪುಸ್ತಕವನ್ನು ದ್ವೇಷವನ್ನು ಹರಡುವ ಪುಸ್ತಕ ಎಂದು ಬಣ್ಣಿಸಿರುವ ರೀತಿಯಿಂದ ಇಡೀ ದೇಶಕ್ಕೆ ನೋವಾಗಿದ್ದು, ಇದು ಎಲ್ಲಾ ಸನಾತನಿಗೆ ಅವಮಾನವಾಗಿದೆ ಮತ್ತು ಈ ಹೇಳಿಕೆಗಾಗಿ ನಾನು ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇನೆ. ಒಂದು ವಾರದೊಳಗೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು, ಅವರು ಕ್ಷಮೆಯಾಚಿಸಬೇಕು. ಇದಾಗದಿದ್ದರೆ ಸಚಿವ ಚಂದ್ರಶೇಖರ್ ಅವರ ನಾಲಿಗೆಯನ್ನು ಕತ್ತರಿಸುವ ಯಾರಿಗಾದರೂ ನಾನು 10 ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ ಎಂದಿದ್ದಾರೆ.
ಇನ್ನು ಈ ರೀತಿಯಾದ ಟೀಕೆಗಳನ್ನು ಸಹಿಸಲಾಗುವುದಿಲ್ಲ. ರಾಮಚರಿತ ಮಾನಸವು ಒಟ್ಟು ಮಾಡುವ ಪುಸ್ತಕ, ವಿಭಜಿಸುವುದಲ್ಲ. ರಾಮಚರಿತ ಮಾನಸವು ಮಾನವೀಯತೆಯನ್ನು ಸ್ಥಾಪಿಸುವ ಪುಸ್ತಕವಾಗಿದೆ. ಇದು ಭಾರತೀಯ ಸಂಸ್ಕೃತಿಯ ರೂಪ, ಇದು ನಮ್ಮ ದೇಶದ ಹೆಮ್ಮೆ ಎಂದು ಹೇಳಿದ್ದಾರೆ.