ಬಳ್ಳಾರಿ, ಜ 12 (DaijiworldNews/DB): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಕುಟುಂಬದ ಒಬ್ಬೊಬ್ಬರೇ ರಾಜಕೀಯ ರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ವಾರದ ಹಿಂದಷ್ಟೇ ಪತ್ನಿ ಲಕ್ಷ್ಮಿ ಅರುಣಾ ಅವರು ರಾಜಕೀಯಕ್ಕೆ ಧುಮುಕಿದ್ದರೆ, ಇದೀಗ ಪುತ್ರಿ ಬ್ರಾಹ್ಮಿಣಿ ಅವರೂ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ.
ತಂದೆ ಜನಾರ್ದನ ರೆಡ್ಡಿಯವರ ಜನ್ಮ ದಿನವಾದ ಜನವರಿ 11ರಂದೇ ಬ್ರಾಹ್ಮಿಣಿ ರಾಜಕೀಯಕ್ಕೆ ಪ್ರವೇಶಗೈದಿದ್ದಾರೆ. ಜನಾರ್ದನ ರೆಡ್ಡಿ ಜನ್ಮದಿನದ ಅಂಗವಾಗಿ ಅವರ ಮನೆ ಮುಂಭಾಗದ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಬ್ರಾಹ್ಮಿಣಿ, ನಮ್ಮ ತಂದೆ ಒಬ್ಬ ಕನಸುಗಾರ. ರಾಜ್ಯ ಕಲ್ಯಾಣಕ್ಕಾಗಿ ಕನಸು ಕಂಡವರು. ನಾನು ಒಬ್ಬಂಟಿ ಎಂದು ಕೆಲ ದಿನಗಳ ಹಿಂದೆ ಅವರು ಹೇಳಿದ ಮಾತು ನನ್ನನ್ನು ಆಲೋಚಿಸುವಂತೆ ಮಾಡಿತ್ತು. ಅದಕ್ಕಾಗಿಯೇ ಅವರ ಜನ್ಮ ದಿನದಂದೇ ನಿಮ್ಮ ಮುಂದೆ ಬಂದಿದ್ದೇನೆ. ನಮ್ಮ ತಂದೆ ಒಂಟಿಯಲ್ಲ, ಅವರೊಂದಿಗೆ ನಾವೆಲ್ಲರೂ ಇದ್ದೇವೆ ಎಂಬ ಸಂದೇಶ ಸಾರಲು ಇದು ಸಶಕ್ತ ಸಮಯ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಂದೆಯನ್ನು ಬೆಂಬಲಿಸಿ ಜಿಲ್ಲೆಯಾದ್ಯಂತ ನಾನು ಪ್ರಚಾರ ಮಾಡುತ್ತೇನೆ. ಬಳ್ಳಾರಿಯ ಅಭಿವೃದ್ದಿಗೆ ಅವರ ಗೆಲುವು ಅಗತ್ಯ ಎಂದು ಇದೇ ವೇಳೆ ಹೇಳಿದರು.