ಮುಂಬೈ (ಮಹಾರಾಷ್ಟ್ರ), ಜ 12 (DaijiworldNews/DB): ತೆಲುಗಿನ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ 2023ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿರುವುದಕ್ಕೆ ಅಭಿನಂದಿಸಿದ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಸಂಗೀತ ಸಂಯೋಜಕ ಮತ್ತು ಗಾಯಕ ಅದ್ನಾನ್ ಸಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಶಸ್ತಿ ಲಭಿಸಿರುವುದಕ್ಕೆ ಚಿತ್ರತಂಡದವರಿಗೆ ಅಭಿನಂದಿಸಿ ಸಿಎಂ ಜಗನ್ ಟ್ವಿಟರ್ನಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ನಲ್ಲಿ 2023ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ತೆಲುಗು ಚಿತ್ರಕ್ಕೆ ಸಿಗುವ ಮೂಲಕ ತೆಲುಗು ಧ್ವಜ ಎತ್ತರಕ್ಕೆ ಹಾರುತ್ತಿದೆ. ಆಂಧ್ರದ ಜನತೆ ಪರವಾಗಿ ಚಿತ್ರತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದೊಂದು ಹೆಮ್ಮೆಯ ಸಂಗತಿ ಎಂದು ಬರೆದಿದ್ದರು.
ಆದರೆ ಸಿಎಂ ಜಗನ್ ಅಭಿನಂದನಾ ಸಂದೇಶಕ್ಕೆ ಗಾಯಕ ಅದ್ನಾನ್ ಸಾಮಿ ಕಿಡಿ ಕಾರಿದ್ದು, ತೆಲುಗು ಧ್ವಜವೇ? ಭಾರತದ ಧ್ವಜವನ್ನು ನೀವು ಅರ್ಥ ಮಾಡಿಕೊಂಡಿದ್ದೀರಾ? ನಾವು ಮೊದಲು ಭಾರತೀಯರು. ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದನ್ನು ಮೊದಲು ನಿಲ್ಲಿಸಿ. ಅಂತಾರಾಷ್ಟ್ರೀಯವಾಗಿ ನಾವು ಒಂದು ದೇಶ. ಪ್ರತ್ಯೇಕತಾವಾದಿ ವರ್ತನೆಯೇ ಒಂದು ಅನಾರೋಗ್ಯಕರ ಬೆಳವಣಿಗೆ. ಧನ್ಯವಾದಗಳು..ಜೈ ಹಿಂದ್! ಎಂದು ಅದ್ನಾನ್ ಬರೆದುಕೊಂಡಿದ್ದಾರೆ.
ಇನ್ನು ಅದ್ನಾನ್ ಸಾಮಿಯ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರಶಂಸೆ ವ್ಯಕ್ತವಾಗುತ್ತಿದ್ದು, ವೈರಲ್ ಆಗುತ್ತಿದೆ.