ಬೆಂಗಳೂರು, ಜ 11 (DaijiworldNews/DB): ನಾಡು ನುಡಿಗಾಗಿ ಅಪಾರ ಸೇವೆ ಸಲ್ಲಿಸುತ್ತಿರುವ ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ಪ್ರಶಸ್ತಿ ಪುರಸ್ಕೃತ ಡಾ. ರೊನಾಲ್ಡ್ ಕೊಲಾಸೊ ನಮ್ಮ ನಡುವೆ ಇರುವ ಜೀವಂತ ದಂತಕಥೆ ಎಂದು ಯುಕೆ ಸಂಸದ ವೀರೇಂದ್ರ ಶರ್ಮ ಹೇಳಿದ್ದಾರೆ.
ಶ್ರೀವಾರಿ ಫೌಂಡೇಶನ್ ವತಿಯಿಂದ ಪ್ರಕಟಿಸಲಾಗಿರುವ ‘ವಿಶ್ವಭೂಷಣ ಡಾ. ಕೊಲಾಸೊ’ ಕಾಫಿ ಟೇಬಲ್ ಪುಸ್ತಕವನ್ನು ದೇವನಹಳ್ಳಿ ಸ್ವಿಸ್ ಟೌನ್ನ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ (ಜನವರಿ 6) ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಮಾಜದ ಅಭಿವೃದ್ಧಿಗಾಗಿ ಹಾಗೂ ಬಡವರ ಕಲ್ಯಾಣಕ್ಕಾಗಿ ಕೊಡುಗೆ ನೀಡಬೇಕೆಂಬುದು ಕೊಲಾಸೊ ಅವರ ಬಹುಕಾಲದ ತುಡಿತವಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅದನ್ನು ಪರಿಪಾಲಿಸಿಕೊಂಡು ಬಂದಿದ್ದಾರೆ. ಸ್ನೇಹಮಯಿ ವ್ಯಕ್ತಿತ್ವದ ಅವರು ನಮ್ಮ ನಡುವಿನ ಸಂತ ಎಂದರು.
ಸಮಾಜದ ಪ್ರತಿಯೊಬ್ಬರ ಅಭ್ಯುದಯ ಬಯಸುವ ಕೊಲಾಸೊ ಅವರನ್ನು ಪ್ರಶಸ್ತಿ ಪುರಸ್ಕಾರಗಳು ತಾವಾಗಿಯೇ ಅರಸಿ ಬರುತ್ತವೆ ಎಂದು ಲಂಡನ್ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರದಾನ ಮಾಡಿರುವ ‘ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸಿ’ಯ ಸಹಿದಾರರೂ ಆದ ವೀರೇಂದ್ರ ಶರ್ಮ ಹೇಳಿದರು.
ಕೊಲಾಸೊ ಅವರು ಮಾತನಾಡಿ, ಯಾವುದೇ ಪ್ರಶಸ್ತಿ ಪುರಸ್ಕಾರವನ್ನು ಬಯಸಿ ನಾನು ಸಮಾಜಸೇವೆ ಮಾಡುವುದಿಲ್ಲ. ಬದಲಿಗೆ, ನನ್ನ ದುಡಿಮೆಯ ಒಂದಿಷ್ಟು ಭಾಗವನ್ನು ಸಮಾಜಕ್ಕೆ ಹಾಗೂ ಬಡವರ ಕಲ್ಯಾಣಕ್ಕೆ ಮೀಸಲಿಡುವುದಾಗಿ ನನ್ನ ಮದುವೆಯ ಸಂದರ್ಭದಲ್ಲಿ ಸಂಕಲ್ಪ ಮಾಡಿದ್ದೆ. ಅದನ್ನು ಅಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದೇನೆ. ಜನರ ಹೃದಯ ತುಂಬಿದ ಪ್ರೀತಿಯೇ ನನಗೆ ಎಲ್ಲಾ ಪ್ರಶಸ್ತಿಗಳಿಗಿಂತ ಮಿಗಿಲಾದುದು ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಉಳ್ಳವರು ವರ್ಷಕ್ಕೆ ಕನಿಷ್ಠ ಒಬ್ಬರ ಬದುಕಿಗಾದರೂ ನೆರವಾಗಬೇಕೆಂಬ ಸಂಕಲ್ಪ ಮಾಡಿದರೆ ಅದಕ್ಕಿಂತ ಮಿಗಿಲಾದುದು ಬೇರೊಂದಿಲ್ಲ ಎಂದರು.
ಸನ್ಮಾನ ಸಮಿತಿ ಸದಸ್ಯರೂ ಆದ ಎನ್. ನರಸಿಂಹಮೂರ್ತಿ ಮತ್ತಿತರರು ಸುಮಾರು ನಾಲ್ಕೂವರೆ ವರ್ಷ ಕಾಲ ಪರಿಶ್ರಮ ವಹಿಸಿ, ನನ್ನ ಸೇವಾ ಕಾರ್ಯಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಒಟ್ಟುಗೂಡಿಸಿದರು. ಅವರೆಲ್ಲರ ಈ ಪ್ರಯತ್ನದಿಂದಾಗಿ ನನಗೆ ಪ್ಯಾರಿಸ್ ಯುರೋಪಿಯನ್ ಯೂನಿವರ್ಸಿಟಿಯ ಪ್ರೊಫೆಷನಲ್ ಡಾಕ್ಟರೇಟ್ ಪದವಿ ದೊರೆತಿದೆ ಎಂದು ತಿಳಿಸಿದರು.
ಎನ್.ನರಸಿಂಹಮೂರ್ತಿ ಅವರನ್ನು ವೀರೇಂದ್ರ ಶರ್ಮ ಅವರು ಸನ್ಮಾನಿಸಿದರು. ನರಸಿಂಹಮೂರ್ತಿ ಅವರು ಮಾತನಾಡಿ, ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗದಂತೆ, ಎಲೆಮರೆಕಾಯಿಯಂತೆ ಹಾಗೂ ಸರಳತೆಯ ಪ್ರತಿರೂಪದಂತೆ ಇರುವ ಕೊಲಾಸೊ ಅವರು ಪ್ರತಿಫಲಾಕ್ಷೆ ಇಲ್ಲದೆ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಹಿಂದೆ ಕೊಲಾಸೊ ಅವರ ದೃಢ ಸಂಕಲ್ಪ ಹಾಗೂ ಅವರ ಕುಟುಂಬದವರ ಪಾತ್ರ ದೊಡ್ಡದಾಗಿದೆ. ಅವರ ಈ ಕಾರ್ಯ ಇಡೀ ಸಮುದಾಯಕ್ಕೆ ಹಾಗೂ ಮುಂಬರುವ ಪೀಳಿಗೆಗಳಿಗೆ ಪ್ರೇರಣೆಯಾಗಲಿದೆ ಎಂಬ ಆಶಯದೊಂದಿಗೆ ಈ ಪುಸ್ತಕವನ್ನು ಹೊರತರಲಾಗಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ರಾಜತಾಂತ್ರಿಕ ಅಧಿಕಾರಿ ಹಾಗೂ ಎಐಸಿಸಿ ಸಾಗರೋತ್ತರ ಪ್ರಧಾನ ಕಾರ್ಯದರ್ಶಿ ಡಾ. ಆರತಿ ಕೃಷ್ಣ, ಜೆಡಿಎಸ್ ಮುಖಂಡ ಎಸ್.ಎಲ್. ಭೋಜೇಗೌಡ, ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್, ಶ್ರೀವಾರಿ ಫೌಂಡೇಷನ್ ಉಪಾಧ್ಯಕ್ಷ ಹಾಗೂ ಈವರೆಗೆ 697 ಕಲ್ಯಾಣೋತ್ಸವಗಳನ್ನು ನೆರವೇರಿಸಿರುವ, ಅನ್ನಮಯ್ಯ ಅವರ ಭಕ್ತರಾದ ಬನ್ನಾರಿ ಅಮ್ಮನ್ ಷುಗರ್ಸ್ ಅಧ್ಯಕ್ಷ ಎಸ್. ವೆಂಕಟೇಶಮೂರ್ತಿ ವೇದಿಕೆಯಲ್ಲಿದ್ದರು.
ಸಂಪಾದಕೀಯ ಮಂಡಳಿ ಸದಸ್ಯ ಮೇಚ ಕೋಟಪ್ಪ ಮತ್ತಿತರರು ಉಪಸ್ಥಿತರಿದ್ದರು. ಅಪರ್ಣಾ ಮತ್ತು ಬಹರೇನ್ ನಲ್ಲಿರುವ ಉದ್ಯಮಿ ಆನಂದ್ ಲೋಬೊ ನಿರೂಪಿಸಿದರು. ಪ್ರೊಫೆಸರ್ ಕೆ.ಇ. ರಾಧಾಕೃಷ್ಣ ಸ್ವಾಗತಿಸಿದರು.
ವಿಸ್ತೃತ ಸೇವೆಯ ಸಚಿತ್ರ ಮಾಹಿತಿ
ಶ್ರೀವಾರಿ ಫೌಂಡೇಶನ್ ಹೊರ ತಂದಿರುವ "ವಿಶ್ವಭೂಷಣ ಡಾ. ರೊನಾಲ್ಡ್ ಕೊಲಾಸೊ" ಪುಸ್ತಕವು ಕೊಲಾಸೊ ಅವರು 24 ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಗಳ ಕುರಿತು ಸಚಿತ್ರ ವಿವರವನ್ನು ಲಭ್ಯವಾಗಿಸುತ್ತದೆ. ಕೊಲಾಸೊ ಅವರು ಶಿಕ್ಷಣ, ಆರೋಗ್ಯ, ಧಾರ್ಮಿಕ, ಕ್ರೀಡೆ ಸೇರಿದಂತೆ ಹಲವು ವಲಯಗಳಲ್ಲಿ ಮಾಡಿರುವ ಕಾರ್ಯಗಳನ್ನು ಇದು ಪರಿಚಯಿಸುತ್ತದೆ. ಜೊತೆಗೆ, ಕೊಲಾಸೊ ಅವರು ಪೊಲೀಸ್ ಠಾಣೆ, ಆಸ್ಪತ್ರೆ, ಶಾಲೆ, ತಾಲೂಕು ಕಚೇರಿ ಇತ್ಯಾದಿ ಕಟ್ಟಡಗಳನ್ನು ನಿರ್ಮಿಸಿಕೊಡುವ ಮೂಲಕ ಸರ್ಕಾರದ ಮೂಲಸೌಕರ್ಯವನ್ನು ಉತ್ತಮಗೊಳಿಸಲು ನೀಡಿರುವ ಕೊಡುಗೆಗಳ ಬಗ್ಗೆಯೂ ವಿವರಗಳನ್ನು ಒಳಗೊಂಡಿದೆ. ಹಾಗೆಯೇ, ಸಂಘ- ಸಂಸ್ಥೆಗಳಿಗೆ ಅವರು ನೀಡಿರುವ ನೆರವಿನ ಹಸ್ತದ ಮಾಹಿತಿಯು ಕೃತಿಯಲ್ಲಿ ಅಡಕವಾಗಿದೆ. "ಕೆರೆಯ ನೀರನು ಕೆರೆಗೆ ಚೆಲ್ಲು" ಎಂಬಂತೆ ಸಮಾಜಕ್ಕೆ ಮಿಡಿದು ಬದುಕುತ್ತಿರುವ ಕೊಲಾಸೊ ಅವರನ್ನು ಅರಸಿ ಬಂದು ಅಲಂಕರಿಸಿರುವ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳ ಬಗ್ಗೆಯೂ ಪುಸ್ತಕದಲ್ಲಿ ತಿಳಿಸಲಾಗಿದೆ.