ತ್ರಿಪುರಾ, ಜ 11 (DaijiworldNews/DB): ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು 10ರ ಬಾಲಕನೊಬ್ಬನಿಗೆ ಯಶಸ್ವಿಯಾಗಿ ಹಲ್ಲಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ! ಶಸ್ತ್ರಚಿಕಿತ್ಸೆಯ ಫೋಟೋಗಳನ್ನು ಸ್ವತಃ ಸಿಎಂ ಸಾಹಾ ಅವರೇ ಟ್ವಿಟರ್ನಲ್ಲಿ ಹಾಕಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ. ಮಾಣಿಕ್ ಸಾಹಾ ಅವರು ಬಳಿಕ ಬಿಜೆಪಿ ಮೂಲಕ ರಾಜಕೀಯಕ್ಕೆ ಧುಮುಕಿ ಈಗ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಹಲವು ವೈದ್ಯರು ತಮ್ಮ ವೃತ್ತಿ ಬಿಟ್ಟು ರಾಜಕೀಯಕ್ಕಿಳಿದು ಬಳಿಕ ಇದೇ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೂಲ ವೃತ್ತಿಗೆ ಒಂದು ದಿನವೂ ಮರಳಲಾಗದಷ್ಟು ಕೆಲಸ ಅವರ ಮೇಲಿರುತ್ತದೆ.
ಒಂದು ರಾಜ್ಯದ ಮುಖ್ಯಮಂತ್ರಿ ಎಂದ ಮೇಲೆ ಅವರ ಹೆಗಲ ಮೇಲೆ ಜವಾಬ್ದಾರಿ ಸಾಕಷ್ಟಿರುತ್ತದೆ. ಆದರೆ ಬಿಡುವಿಲ್ಲದಿದ್ದರೂ ಬಿಡುವು ಮಾಡಿಕೊಂಡು ಸಿಎಂ ಮಾಣಿಕ್ ಸಾಹಾ ಅವರು ಬಾಲಕನ ಹಲ್ಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ತ್ರಿಪುರಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ತಂಡದೊಂದಿಗೆ ಬಾಲಕನ ಬಾಯಿಯ ಸಿಸ್ಟಿಕ್ ಲೆಸಿಯಾನ್ಗೆ ಶಸ್ತ್ರಚಿಕಿತ್ಸೆಯನ್ನು ಸಾಹಾ ಮಾಡಿದ್ದಾರೆ.
ಇನ್ನು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಾಹಾ, ಕೇವಲ ಅರ್ಧ ಗಂಟೆಯಲ್ಲಿ ಅನುಭವಿ ವೈದ್ಯರ ತಂಡದ ನೆರವಿನಿಂದಿಗೆ ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶೀಘ್ರ ಆತ ಗುಣಮುಖನಾಗಲಿದ್ದಾನೆ ಎಂದು ಬರೆದುಕೊಂಡಿದ್ದಾರೆ.