ಉತ್ತರ ಪ್ರದೇಶ, ಜ 11 (DaijiworldNews/DB): ನಾಯಿ ಬೊಗಳಿದಕ್ಕೆ ಇತ್ತಂಡಗಳ ನಡುವೆ ಉಂಟಾದ ಘರ್ಷಣೆ ಮಹಿಳೆಯೊಬ್ಬರ ಸಾವಿನಿಂದ ಅಂತ್ಯಗೊಂಡ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.
ಬಲ್ಲಿಯಾ ನಿವಾಸಿ ಲಾಲ್ ಮುನಿ (50 ವರ್ಷ) ಮೃತಪಟ್ಟವರು. ಘಟನೆ ಸಂಬಂಧ ಮೂವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಶಿವ ಸಾಗರ್ ಬಿಂದ್ ಮತ್ತು ಅವರ ಪುತ್ರ ಅಜಿತ್ ಬಂಧಿತರು.
ನಾಯಿ ಬೊಗಳಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ತಂಡಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಲಾಲ್ ಮುನಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಇನ್ನೂ ಐವರು ಗಾಯಗೊಂಡಿದ್ದು, ಅವರನ್ನು ಸನಿಹದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಹಿಳೆಯ ಪುತ್ರ ನೀಡಿದ ದೂರಿನ ಮೇರೆಗೆ ಮೂವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದುರ್ಗಾ ಪ್ರಸಾದ್ ತಿವಾರಿ ತಿಳಿಸಿದ್ದಾರೆ.