ನವದೆಹಲಿ, ಜ 11 (DaijiworldNews/DB): ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಜಾಮೀನು ನೀಡುವ ಆದೇಶವನ್ನು ಕಾಯ್ದಿರಿಸಿದೆ.
ಆರೋಪಿ ಶಂಕರ್ ಮಿಶ್ರಾ ಪರ ವಾದ ಮಂಡಿಸಿದ ನ್ಯಾಯವಾದಿ ಮನು ಶರ್ಮಾ, ಶಂಕರ್ ಮಿಶ್ರ ಮೇಲೆ ದಾಖಲಾಗಿರುವ ಆರೋಪಗಳ ಪೈಕಿ ಒಂದು ಮಾತ್ರ ಜಾಮೀನುರಹಿತವಾಗಿದೆ. ಉಳಿದೆಲ್ಲವೂ ಜಾಮೀನು ನೀಡಬಹುದಾದ ಆರೋಪಗಳಾಗಿರುವುದರಿಂದ ಅವರಿಗೆ ಜಾಮೀನು ಮಂಜೂರು ಮಾಡಬಹುದು ಎಂದು ಕೋರ್ಟ್ ಮುಂದೆ ಹೇಳಿದ್ದರು. ಕಕ್ಷಿದಾರರು ತನಿಖೆಗೆ ಎಲ್ಲಾ ರೀತಿಯಲ್ಲಿಯೂ ಸಹಕರಿಸುತ್ತಿದ್ದು, ತಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸುವ ಉದ್ದೇಶ ಹೊಂದಿದ್ದಾರೆ ಎಂದೂ ವಾದ ಮಂಡಿಸಿದ್ದರು.
ಆದರೆ ಜಾಮೀನು ನೀಡುವುದಕ್ಕೆ ದೆಹಲಿ ಪೊಲೀಸರು ವಿರೋಧಿಸಿದ್ದರು. ಜಾಮೀನು ದೊರೆತಲ್ಲಿ ಆರೋಪಿಯು ಸಂತ್ರಸ್ತೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸರು ವಾದಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿದೆ.