ಉತ್ತರ ಪ್ರದೇಶ, ಜ 11 (DaijiworldNews/DB): ರೈಲಿನಲ್ಲಿ ನೀಡಿದ ಹೊದಿಕೆಯ ವಾಸನೆಯಿಂದಾಗಿ ಪ್ರಯಾಣಿಕರ ಆರೋಗ್ಯ ಹದಗೆಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಾರಣಾಸಿಗೆ ಪ್ರಯಾಣಿಸುತ್ತಿದ್ದ 15008 ಕ್ರಿಶಕ್ ಎಕ್ಸ್ಪ್ರೆಸ್ನ ಎಸಿ ಕೋಚ್ ಬಿ-5 ನಲ್ಲಿದ್ದ ಪ್ರಯಾಣಿಕರಿಗೆ ಹೊದಿಕೆಗಳನ್ನು ನೀಡಲಾಗಿತ್ತು. ಆದರೆ ಈ ಹೊದಿಕೆಗಳು ಕೊಳಕಾಗಿದ್ದು, ಅದರಿಂದ ದುರ್ವಾಸನೆ ಬರುತ್ತಿತ್ತು. ಇದರಿಂದ ಪ್ರಯಾಣಿಕರ ಆರೋಗ್ಯವೂ ಹದಗೆಟ್ಟಿತ್ತು. ಕೆಲವರಿಗೆ ವಾಂತಿ ಬಂದಂತಾಯಿತು ಎಂಬ ದೂರಿನ ಮೇರೆಗೆ ಬೇರೆ ಹೊದಿಕೆಗಳನ್ನು ಪ್ರಯಾಣಿಕರಿಗೆ ವಿತರಿಸಲಾಯಿತು.
ಆದರೆ ಬಾದಶಹನಗರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದಾಗ ಹೊದಿಕೆಯ ದುರ್ವಾಸನೆಯಿಂದಾಗಿ ವಾಕರಿಕೆ ಅನುಭವವಾಯಿತು ಎಂದು ವೈದ್ಯರಿಗೆ ಪ್ರಯಾಣಿಕರು ತಿಳಿಸಿದರು. ಬಳಿಕ ಅವರಿಗೆ ಅಗತ್ಯ ಔಷಧ ನೀಡಿ ಚೇತರಿಕೆ ಕಂಡ ಬಳಿಕ ರೈಲು ಸಂಚಾರ ಪುನರಾರಂಭಗೊಂಡಿತು.
ಇನ್ನು ಘಟನೆ ಸಂಬಂಧ ಪ್ರಯಾಣಿಕರೊಬ್ಬರು ದೂರು ನೀಡಿದ್ದು, ರೈಲ್ವೇ ಇಲಾಖೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ. ಘಟನೆ ಸೋಮವಾರ ನಡೆದಿದೆ.