ಫತೇಘರ್ ಸಾಹಿಬ್ (ಪಂಜಾಬ್), ಜ 11 (DaijiworldNews/DB): ದೇಶದಲ್ಲಿ ಭಯ ಹಾಗೂ ದ್ವೇಷ ಹರಡುವುದೇ ಬಿಜೆಪಿಯ ಕೆಲಸವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೊ ಯಾತ್ರೆ ಪಂಜಾಬ್ಗೆ ಪ್ರವೇಶಿಸಿದ್ದು, ಇಲ್ಲಿನ ಗುರುದ್ವಾರ ಫತೇಘರ್ ಸಾಹಿಬ್ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸರ್ಹಿಂದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ, ಜಾತಿ, ಭಾಷೆಗಳನ್ನು ಪರಸ್ಪರ ಎತ್ತಿ ಕಟ್ಟುವ ಮೂಲಕ ದೇಶದ ಒಟ್ಟು ಸ್ಥಿತಿಯನ್ನು ಬಿಜೆಪಿ ಮತ್ತು ಆರೆಸ್ಸೆಸ್ನವರು ಹಾಳುಗೆಡವುತ್ತಿದ್ದಾರೆ. ದೇಶವನ್ನು ವಿಭಜಿಸುವುದು, ದ್ವೇಷ ಹರಡುವುದು, ಭಯ ಹುಟ್ಟಿಸುವುದು ಅವರ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಸೋದರತ್ವ, ಏಕತೆ ಹಾಗೂ ಒಗ್ಗಟ್ಟನ್ನು ಮರು ಸ್ಥಾಪಿಸುವ ಉದ್ದೇಶ ಹೊತ್ತು ಕಾಂಗ್ರೆಸ್ನ ಭಾರತ್ ಜೋಡೊ ಯಾತ್ರೆ ಸಾಗುತ್ತಿದೆ. ಸಣ್ಣ ಅಂಗಡಿ ಮಾಲಕರು, ರೈತರು, ಕಾರ್ಮಿಕರು, ನಿರುದ್ಯೋಗಿಗಳು ಸಹಿತ ಕಷ್ಟದಲ್ಲಿರುವವರೊಂದಿಗೆ ಮಾತನಾಡಿ ಅವರ ಕಷ್ಟ ಆಲಿಸುವ ಕೆಲಸವನ್ನು ಯಾತ್ರೆಯುದ್ದಕ್ಕೂ ಮಾಡಲಾಗಿದೆ ಎಂದವರು ತಿಳಿಸಿದರು.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪ್ರತಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಜ್ವಾ, ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಭೂಪಿಂದರ್ ಸಿಂಗ್ ಹೂಡಾ, ಚರಣ್ಜಿತ್ ಸಿಂಗ್ ಚನ್ನಿ ಮತ್ತಿತರರು ಉಪಸ್ಥಿತರಿದ್ದರು.