ನವದೆಹಲಿ, ಜ 11 (DaijiworldNews/DB): ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿರುವ ಬೆನ್ನಲ್ಲೇ ಮಂದಿರಕ್ಕೆ ದಾಳಿ ನಡೆಸಲು ಉಗ್ರರು ಹೊಂಚು ಹಾಕಿರುವ ಸಂಗತಿ ಗುಪ್ತಚರ ಮೂಲಗಳಿಂದ ಬಯಲಾಗಿದೆ.
ಮಂದಿರವನ್ನು ಗುರಿಯಾಗಿಸಿ ಆತ್ಮಾಹುತಿ ಅಥವಾ ಗುಂಡಿನ ದಾಳಿ ನಡೆಸಲು ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಗಳು ಹೊಂಚು ಹಾಕುತ್ತಿವೆ ಎಂಬ ಆಘಾತಕಾರಿ ಅಂಶವನ್ನು ಗುಪ್ತಚರ ಮೂಲಗಳು ಹೊರ ಹಾಕಿವೆ. ಈಗಾಗಲೇ ಉಗ್ರ ದಾಳಿ ಹೊಂಚು ಕುರಿತಾಗಿ ಕೇಂದ್ರ ಸರ್ಕಾರಕ್ಕೆ ಅಧಿಕಾರಿಗಳು ಗೌಪ್ಯ ವರದಿ ಸಲ್ಲಿಸಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ 'ಐಎಸ್ಐ' ಲಷ್ಕರ್ ಎ ತಯಬಾ (ಎಲ್ಇಟಿ) ಹಾಗೂ ಜೈಷ್-ಎ- ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗಳಿಗೆ ಈ ದಾಳಿಗೆ ಟಾರ್ಗೆಟ್ ನೀಡಿದೆ ಎನ್ನಲಾಗಿದೆ.
ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಮಂದಿರದ ಮೇಲೆ ದಾಳಿ ನಡೆಸಿ ಕೋಮು ಸೌಹಾರ್ದ ಕೆಡಿಸುವ ಉದ್ದೇಶವನ್ನು ಈ ಸಂಘಟನೆಗಳು ಹೊಂದಿದ್ದು, ಅದಕ್ಕಾಗಿ ಬಾಂಬ್, ಶಸ್ತ್ರಾಸ್ತ್ರ, ನಕಲಿ ಕರೆನ್ಸಿಗಳನ್ನು ನೇಪಾಳ ಮಾರ್ಗವಾಗಿ ಭಾರತಕ್ಕೆ ತರಲು ಯೋಜನೆಗಳನ್ನು ಸಿದ್ದಪಡಿಸಿಕೊಂಡಿವೆ. ಇನ್ನು ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಹೆಚ್ಚಿಸಿ ದಂಗೆಯೇಳುವಂತೆ ಮಾಡುವುದು ಉಗ್ರ ಸಂಘಟನೆಗಳ ಉದ್ದೇಶವಾಗಿದೆ ಎಂಬ ಆಘಾತಕಾರಿ ಮಾಹಿತಿಗಳನ್ನು ಗುಪ್ತಚರ ಸಂಸ್ಥೆ ಅಧಿಕಾರಿಗಳು ಕೇಂದ್ರಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಶ್ಮೀರದಲ್ಲಿ ಮತ್ತೆ ತನ್ನ ಹಿಡಿತ ಸಾಧಿಸುವುದಕ್ಕಾಗಿ ಪಾಕ್ ಮೂಲದ ಐಎಸ್ಐ ಸಂಸ್ಥೆಯು ಉಗ್ರರನ್ನು ಬಳಸಿಕೊಳ್ಳುತ್ತಿದೆ. ಮಾದಕ ವಸ್ತು ಮಾರಾಟದ ಮೂಲಕ ಸ್ಥಳೀಯ ಯುವಕರನ್ನು ತನ್ನತ್ತ ಸೆಳೆಯುವುದೂ ಅದರ ಉದ್ದೇಶವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.