ನವದೆಹಲಿ, ಜ 11 (DaijiworldNews/DB): ಬಳಸು, ಅಲಕ್ಷಿಸು ಮತ್ತು ವಂಚಿಸು ಎಂಬ ಬಿಜೆಪಿಯ ನೀತಿಯಿಂದಾಗಿ ಕಾಶ್ಮೀರಿ ಪಂಡಿತ ಉದ್ಯೋಗಿಗಳ ಪರಿಸ್ಥಿತಿ ಹದಗೆಟ್ಟಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಾಶ್ಮೀರಿ ಪಂಡಿತ ಸಮುದಾಯದ ಉದ್ಯೋಗಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಖರ್ಗೆ, ಬದುಕುವ ಹಕ್ಕಿಗಾಗಿ, ಸ್ಥಳಾಂತರಿಸಲು ಆಗ್ರಹಿಸಿ ಅವರು 245ಕ್ಕೂ ಅಧಿಕ ದಿನಗಳಿಂದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ವೇತನ ಕೂಡಾ ನೀಡದೆ ತಡೆಹಿಡಿಯಲಾಗಿದೆ. ಅವರ ಭದ್ರತೆ ಜೊತೆ ರಾಜಿ ಮಾಡಿಕೊಳ್ಳಲಾಗಿದೆ. ಬಳಸು, ಅಲಕ್ಷಿಸು, ವಂಚಿಸು ಎಂಬ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಕಾಶ್ಮೀರಿ ಪಂಡಿತ ಸಮಯದಾದಯ ಉದ್ಯೋಗಿಗಳ ಪರಿಸ್ಥಿತಿಗೆ ಬಿಜೆಪಿಯ ಈ ನೀತಿಯೇ ಕಾರಣ ಎಂದಿದ್ದಾರೆ.
ಕಾಶ್ಮೀರಿ ಪಂಡಿತ್ ಸಮಯದಾಯದ ಉದ್ಯೋಗಿ ರಾಹುಲ್ ಭಟ್ ಎಂಬವರನ್ನು ಕಚೇರಿಯಲ್ಲಿರುವಾಗಲೇ ಉಗ್ರರು ಗುಂಡಿಕ್ಕಿ ಹತ್ಯೆಗೈದ ಘಟನೆ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದಿತ್ತು. ಈ ಘಟನೆ ಬಳಿಕ ಕಾಶ್ಮೀರಿ ಪಂಡಿತ್ ಸಮುದಾಯದ ಉದ್ಯೋಗಿಗಳು ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.