ಶ್ರೀನಗರ, ಜ 10 (DaijiworldNews/DB): ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಿ ಎಂದು ಕೇಂದ್ರ ಸರ್ಕಾರದ ಮುಂದೆ ಕಾಶ್ಮೀರಿಗಳು ಭಿಕ್ಷೆ ಬೇಡುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಅನಂತ್ನಾಗ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಚುನಾವಣೆ ಜನರ ಹಕ್ಕು. ಆದರೆ ನಾವು ಭಿಕ್ಷುಕರಲ್ಲ. ಈ ಹಕ್ಕನ್ನು ನೀಡಿ ಎಂದು ಕೇಂದ್ರದ ಮುಂದೆ ಭಿಕ್ಷೆ ಬೇಡುವುದಿಲ್ಲ ಎಂದರು.
ಚುನಾವಣೆಗಳು ನಮಗೆ ಬೇಕು. ಅದರಲ್ಲಿ ಭಾಗವಹಿಸುವುದು ನಮ್ಮ ಹಕ್ಕು. ಆದರೆ ಅವರಿಗೆ ಚುನಾವಣೆ ಇಷ್ಟವಿಲ್ಲದಿದ್ದರೆ ಅವರಿಷ್ಟದಂತೆಯೇ ಆಗಲಿ. ನಾವು ಚುನಾವಣೆ ಮಾಡಿ ಎಂದು ಅವರ ಬಳಿ ಕೇಳಲು ಹೋಗುವುದಿಲ್ಲ ಎಂದವರು ತಿಳಿಸಿದರು.
ಜಮ್ಮು ಕಾಶ್ಮೀರದಲ್ಲಿ ಆಸ್ತಿ ಮತ್ತು ಸರ್ಕಾರಿ ಭೂಮಿಯಿಂದ ಜನರನ್ನು ತೆರವುಗೊಳಿಸುತ್ತಿರುವುದೂ ಇಲ್ಲಿ ಚುನಾವಣೆ ನಡೆಯದಿರುವುದಕ್ಕೆ ಒಂದು ಕಾರಣವಾಗಿದೆ.ಜನರ ಗಾಯಕ್ಕೆ ಮುಲಾಮು ಹಚ್ಚುವ ಕೆಲಸ ಮಾಡದೇ, ನೋವು ಹೆಚ್ಚು ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರಿಗಳಿಗೆ ಕಿರುಕುಳ ಕೊಡುವ ಪ್ರಯತ್ನ ಆಗುತ್ತಿದೆ ಎಂದು ಇದೇ ವೇಳೆ ಅವರು ಕಿಡಿ ಕಾರಿದರು.