ನವದೆಹಲಿ, ಜ 10 (DaijiworldNews/DB): 25 ವರ್ಷದ ಯುವತಿಯೋರ್ವಳ ಹೃದಯ ಕಸಿಗಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 15 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಆ ಮೂಲಕ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.
ಗುರುಗ್ರಾಮದ ಆಯುಷಿ ಶರ್ಮಾ ಎಂಬ ಯುವತಿಗೆ ಹೃದಯದ ಕಸಿ ಮಾಡಲು ಹಣದ ಅಗತ್ಯವಿತ್ತು. ಈ ಬಗ್ಗೆ ಆಯುಷಿ ಅಜ್ಜ ಯೋಗೇಂದ್ರ ಅರುಣ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಹಣಕ್ಕೆ ನೆರವು ಯಾಚಿಸಿದ್ದರು. ಕೂಡಲೇ ಆಕೆಯ ನೆರವಿಗೆ ಧಾವಿಸಿದ ನಟ ಅಕ್ಷಯ್ಕುಮಾರ್ 15 ಲಕ್ಷ ರೂ.ಗಳನ್ನು ಆಕೆಯ ಅಜ್ಜನಿಗೆ ನೀಡಿದ್ದಾರೆ. ಆದರೆ ದಾನಗೈದ ಹಣದ ಬಗ್ಗೆ ಅಕ್ಷಯ್ಕುಮಾರ್ ಖಾಸಗಿಯಾಗಿಟ್ಟಿದ್ದರೂ, ಆಯುಷಿ ಅಜ್ಜ ನಟನ ಸಹಾಯದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡು ಧನ್ಯವಾದ ಅರ್ಪಿಸಿದ್ದಾರೆ.
ಯುವತಿಯ ಸ್ಥಿತಿ ಚಿಂತಾಜನಕವಾಗಿರುವ ಬಗ್ಗೆ ನಿರ್ದೇಶಕ ಸಮರ್ಥ್ ಪೃಥ್ವಿರಾಜ್ ಮತ್ತು ಡಾ. ಚಂದ್ರಪ್ರಕಾಶ್ ದ್ವಿವೇದಿ ಅವರಿಂದ ತಿಳಿದುಕೊಂಡ ನಟ ಅಕ್ಷಯ್ಕುಮಾರ್, ಯುವತಿಯ ಸಹಾಯಕ್ಕೆ ಧಾವಿಸಿದ್ದಾರೆ.
ಹುಟ್ಟಿನಿಂದಲೇ ಹೃದಯದ ಸಮಸ್ಯೆಗೊಳಗಾಗಿದ್ದ ಆಯುಷಿಯ ಹೃದಯವು 25ನೇ ವಯಸ್ಸಿನಲ್ಲಿ ಶೇ. 25ರಷ್ಟು ಮಾತ್ರ ಕಾರ್ಯಾಚರಿಸುತ್ತಿತ್ತು. ಹೃದಯದ ಕಸಿಯೊಂದೇ ಈ ಸಮಸ್ಯೆಗೆ ಪರಿಹಾರವಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದರು. ಸದ್ಯ ಹೃದಯವನ್ನು ದಾನವಾಗಿ ನೀಡುವವರಿಗಾಗಿ ಕಾಯುತ್ತಿದ್ದೇವೆ ಎಂದು ಆಯುಷಿ ಅಜ್ಜ ಯೋಗೇಂದ್ರ ತಿಳಿಸಿರುವುದಾಗಿ ವರದಿಯಾಗಿದೆ.
ವರದಿ ಪ್ರಕಾರ ಆಯುಷಿ ಚಿಕಿತ್ಸೆಗೆ 50 ಲಕ್ಷ ರೂ. ಅಗತ್ಯವಿದೆ. ಒಂದು ವೇಳೆ ಅವಶ್ಯಕತೆ ಬಿದ್ದಲ್ಲಿ ಇನ್ನಷ್ಟು ಸಹಾಯ ಮಾಡಲಾಗುವುದು ಎಂದು ಅಕ್ಷಯ್ಕುಮಾರ್ ಭರವಸೆಯಿತ್ತಿದ್ದಾರೆ ಎನ್ನಲಾಗಿದೆ.