ಲಕ್ನೋ, ಜ 10 (DaijiworldNews/DB): ಪತ್ನಿ ನನ್ನ ಮೇಲೆ ಮುನಿಸಿಕೊಂಡಿದ್ದಾಳೆ. ನನಗೆ ರಜೆ ಬೇಕು ಎಂದು ಕಾನ್ಸ್ಟೇಬಲ್ವೊಬ್ಬರು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪತ್ರ ನೋಡಿದ ಮೇಲಧಿಕಾರಿಗಳು ಕಾನ್ಸ್ಟೇಬಲ್ಗೆ ಐದು ದಿನಗಳ ರಜೆ ಮಂಜೂರು ಮಾಡಿದ್ದಾರೆ.
ಪೊಲೀಸ್ ಕೆಲಸ ಎಂದ ಮೇಲೆ ಹಗಲು ರಾತ್ರಿ ಕೆಲಸ. ಈ ಕ್ಷೇತ್ರದಲ್ಲಿ ರಜೆ ಸಿಗುವುದೇ ಕಷ್ಟ. ಹೀಗಿರುವಾಗ ಹೊಸದಾಗಿ ಮದುವೆಯಾದ ಕಾನ್ಸ್ಟೇಬಲ್ವೊಬ್ಬರು ಮದುವೆಯಾದ ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ.
ಈ ನಡುವೆ ಪತ್ನಿಯ ಸಂಬಂಧಿಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಪತ್ನಿಗೆ ಭರವಸೆ ನೀಡಿದ್ದ ಕಾನ್ಸ್ಟೇಬಲ್ ಕೆಲಸದ ಅತಿಯಾದ ಒತ್ತಡದಿಂದಾಗಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ರಜೆ ಸಿಗುವುದಿಲ್ಲ ಎಂಬುದಾಗಿ ಪತ್ನಿಗೆ ಹೇಳಿದ್ದಾರೆ. ಆದರೆ ಇದರಿಂದ ಪತ್ನಿ ಕೋಪಗೊಂಡಿದ್ದು, ಪತಿಯಲ್ಲಿ ಮಾತು ಬಿಟ್ಟಿದ್ದಾರೆ.
ಪತ್ನಿ ಮಾತು ಬಿಟ್ಟಿದ್ದರಿಂದ ನೊಂದ ಕಾನ್ಸ್ಟೇಬಲ್ ಮೇಲಧಿಕಾರಿಗೆ ಪತ್ರ ಬರೆದು, ನನಗೆ ರಜೆ ಬೇಕು, ರಜೆ ಇಲ್ಲವೆಂದು ನನ್ನ ಪತ್ನಿ ಮುನಿಸಿಕೊಂಡಿದ್ದಾಳೆ. ನನ್ನ ಫೋನ್ಗೂ ಪ್ರತಿಕ್ರಿಯಿಸುತ್ತಿಲ್ಲ ಎಂದು ತನ್ನ ಸಮಸ್ಯೆ ತೋಡಿಕೊಂಡಿದ್ದಾರೆ. ಪತ್ರ ನೋಡಿದ ಮೇಲಧಿಕಾರಿಗಳು ಜನವರಿ 10ರಿಂದ ಐದು ದಿನಗಳ ಕಾಲ ರಜೆಯನ್ನು ಮಂಜೂರು ಮಾಡಿದ್ದಾರೆ. ಸದ್ಯ ಕಾನ್ಸ್ಟೇಬಲ್ ಮೇಲಧಿಕಾರಿಗಳಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.