ನವದೆಹಲಿ, ಜ 10 (DaijiworldNews/DB): ಭಾರತೀಯ ಸೇನೆ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿರುವ ಜೆಎನ್ಯೂ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಹಾಗೂ ಎಐಎಸ್ಎ ಸದಸ್ಯೆ ಶೆಹ್ಲಾ ರಶೀದ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಪೊಲೀಸರಿಗೆ ಅನುಮತಿ ಲಭಿಸಿದೆ.
ಶೆಹ್ಲಾ ವಿರುದ್ದ ಕಾನೂನು ಕ್ರಮಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಮಂಗಳವಾರ ಅನುಮತಿ ನೀಡಿದ್ದಾರೆ. ಸೇನೆ ವಿರುದ್ದದ ಟ್ವೀಟ್ ಸಂಬಂಧಿಸಿದಂತೆ ಅಡ್ವೊಕೇಟ್ ಅಲಾಖ್ ಅಲೋಕ್ ಶ್ರೀವಾಸ್ತವ ಅವರು ದೂರು ನೀಡಿದ್ದರು. ದೂರು ಆಧಾರಿತವಾಗಿ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಸೆಪ್ಟೆಂಬರ್ 3, 2019ರ ಎಫ್ಐಆರ್ಗೆ ಈ ಪ್ರಾಸಿಕ್ಯೂಷನ್ ಮಂಜೂರಾತಿಗೆ ಸಂಬಂಧಿಸಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ನೀಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಆಕೆ ವಿರುದ್ದ ದೆಹಲಿ ಪೊಲೀಸರು ವಿಶೇಷ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.
2019ರ ಆಗಸ್ಟ್ನಲ್ಲಿ ಈಕೆ ಸರಣಿ ಟ್ವೀಟ್ ಮಾಡಿ ಭಾರತೀಯ ಸೇನೆ ವಿರುದ್ದ ಸತ್ಯಕ್ಕೆ ದೂರವಾದ ಆರೋಪ ಮಾಡಿದ್ದಲ್ಲದೆ, ದ್ವೇಷ ಸೃಷ್ಟಿಸುವ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿತ್ತು. ಭಾರತೀಯ ಸೇನೆಯು ಜಮ್ಮ-ಕಾಶ್ಮೀರದ ಜನರಿಗೆ ಹಿಂಸೆ ನೀಡುತ್ತಿದೆ ಎಂದು ಶೆಹ್ಲಾ ಟ್ವೀಟ್ ಮಾಡಿದ್ದರು. ಇನ್ನು ಈ ಹೇಳಿಕೆ ಆಧಾರರಹಿತ ಎಂದು ಭಾರತೀಯ ಸೇನೆ ಹೇಳಿಕೆ ನೀಡಿತ್ತು.