ನವದೆಹಲಿ, ಜ 10 (DaijiworldNews/DB): ರಷ್ಯಾದ ಮಾಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ ಚಾರ್ಟರ್ಡ್ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಗುಜರಾತ್ನ ಜಾಮ್ನಗರದ ಭಾರತೀಯ ವಾಯುಸೇನೆಯ ನೆಲೆಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ವಿಮಾನದಲ್ಲಿ ಪತ್ತೆಯಾಗಿಲ್ಲ.
ವಿಮಾನದಲ್ಲಿ ಬಾಂಬ್ ಇರುವುದಾಗಿ ಕರೆ ಬಂದ ಹಿನ್ನೆಲೆಯಲ್ಲಿ ಕೂಡಲೇ ಸಿಬಂದಿ ಪೈಲಟ್ಗೆ ಮಾಹಿತಿ ನೀಡಿದ್ದಾರೆ. ಡಬೋಲಿಮ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನವನ್ನು ಕೂಡಲೇ ಗುಜರಾತ್ನ ಜಾಮ್ನಗರದ ಭಾರತೀಯ ವಾಯುಸೇನೆಯ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. 244 ಮಂದಿ ವಿಮಾನದಲ್ಲಿ ಸಂಚರಿಸುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕೆಳಗಿಳಿಸಿ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ಮಾಡಿಸಲಾಯಿತು.
ಸದ್ಯ ಡಬೋಲಿಮ್ ವಿಮಾನ ನಿಲ್ದಾಣದ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅಲ್ಲದೆ ವಿಮಾನದ ಎಲ್ಲಾ ಕ್ಯಾಬಿನೆಟ್ಗಳನ್ನು ಪರಿಶೀಲಿಸಲಾಗಿದೆ. ವಿಮಾನದೊಳಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.