ತಿರುವನಂತಪುರ, ಜ 10 ( DaijiworldNews/MS): ಅಯ್ಯಪ್ಪ ಸ್ವಾಮಿ ವ್ರತಧಾರಿಗಳು ಸೆಲೆಬ್ರಿಟಿಗಳ ಪೋಟೋ, ಪೋಸ್ಟರ್ ಗಳನ್ನು ಹಿಡಿಕೊಂಡು ಬಂದರೆ ಅಂಥವರಿಗೆ ಸನ್ನಿಧಾನಕ್ಕೆ ಪ್ರವೇಶಕ್ಕೆ ಅವಕಾಶ ನೀಡಬಾರದೆಂದು ಕೇರಳ ಹೈಕೋರ್ಟ್ ಜ.೯ ರಂದು ತೀರ್ಪು ನೀಡಿದೆ.
ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ ಜಿ ಅಜಿತ್ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಯಾತ್ರಾರ್ಥಿಯೊಬ್ಬರ ದೂರಿನ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನಡೆಸಿ ತಿರುವಾಂಕೂರು ದೇವಸ್ವಂ ಮಂಡಳಿಗೆ ಪ್ರತಿಯೊಬ್ಬ ಅಯ್ಯಪ್ಪನ ಭಕ್ತ ತನ್ನ ಪೂಜಾ ಆರಾಧನವನ್ನು ಪದ್ದತಿಯಂತೆ, ಸಾಂಪ್ರದಾಯಿಕ ವಿಧಿಗಳಂತೆ ಮಾಡುವುದನ್ನು ನೋಡಿಕೊಳ್ಳಬೇಕೆಂದು ನಿರ್ದಶನ ನೀಡಿದೆ.
ಯಾತ್ರಾರ್ಥಿಗಳು ಸಿನಿಮಾ ತಾರೆಯರ ಫೋಟೋ, ರಾಜಕಾರಣಿಗಳ ಫೋಟೋ, ಬ್ಯಾನರ್ ಯಾವುದನ್ನು ದೇವರ ದರ್ಶನ ಪಡೆಯುವ ವೇಳೆ ತರುವಂತಿಲ್ಲ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮಂಡಳಿಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೋರ್ಟ್ ಹೇಳಿದೆ.