ಚಂಡೀಗಢ, ಜ 10 (DaijiworldNews/HR): 21ನೇ ಶತಮಾನದ ಕೌರವರು ಖಾಕಿ ಪ್ಯಾಂಟ್ ಧರಿಸುತ್ತಾರೆ, ಕೈಯಲ್ಲಿ ಲಾಠಿಗಳನ್ನು ಹಿಡಿದುಕೊಳ್ಳುತ್ತಾರೆ. ಶಾಖೆಗಳನ್ನು ನಡೆಸುತ್ತಿದ್ದಾರೆ. ದೇಶದ 2- 3 ಕೋಟ್ಯಾಧಿಪತಿಗಳು ಸಹಿತ ಈ ಕೌರವರ ಜೊತೆಗೆ ನಿಂತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರ್ಎಸ್ಎಸ್ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ಪಾಂಡವರು ನೋಟು ಅಮಾನ್ಯೀಕರಣ ಮಾಡಿದ್ದರೇ?, ತಪ್ಪು ಜಿಎಸ್ಟಿ ಜಾರಿಗೊಳಿಸಿದ್ದರೇ?, ಇಂತಹ ತಪ್ಪು ನಿರ್ಧಾರಗಳನ್ನು ಅವರು ಎಂದಾದರೂ ಮಾಡಿದ್ದರೇ? ಎಂದಿಗೂ ಮಾಡಿಲ್ಲ. ಕಾರಣ ಅವರು ತಪಸ್ವಿಗಳಾಗಿದ್ದರು. ನೋಟು ಅಮಾನ್ಯೀಕರಣ, ಜಿಎಸ್ಟಿ, ಕೃಷಿ ಕಾನೂನುಗಳು ಜಾರಿ ಮಾಡಿ ಈ ನೆಲದ ರೈತರಿಂದ ಭೂಮಿ ಕದಿಯುವ ಬಗ್ಗೆ ಪ್ರಧಾನಿ ಗೊತ್ತಿತ್ತು. ಆದರೂ, ಅವರು ಈ ನಿರ್ಧಾರಗಳಿಗೆ ಸಹಿ ಹಾಕಿದರು ಎಂದರು.
ಇನ್ನು ಆರ್ಎಸ್ಎಸ್ ಕಾರ್ಯಕರ್ತರು ಜೈಶ್ರೀರಾಮ್ ಎಂಬುದನ್ನು ಬಿಟ್ಟು ಬೇರೆ ಏನೂ ಹೇಳುವುದಿಲ್ಲ. ಜೈ ಸೀತಾರಾಮ, ಹರಹರ ಮಹಾದೇವ ಎಂದು ಕೂಗಲ್ಲ. ನಾನು ಈ ಬಗ್ಗೆ ಹಲವು ಬಾರಿ ಯೋಚಿಸಿದ್ದೇನೆ ಎಂದಿದ್ದಾರೆ.