ಬೆಂಗಳೂರು, ಜ 09 ( DaijiworldNews/MS): ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ನಿಂದ ಮಧ್ಯಂತರ ತಡೆಯಾಜ್ಞೆ ಹೊರಬಿದ್ದಿದೆ. ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮಕ್ಕೂ ಕೆಲ ನಿಮಿಷಗಳ ಮುನ್ನ ಕೋರ್ಟ್ನಿಂದ ತಡೆಯಾಜ್ಞೆ ಹೊರಬಿದ್ದಿದೆ.ಇದರಿಂದ ಪುಸ್ತಕ ಬಿಡುಗಡೆಗೆ ಮುಂದಾಗಿದ್ದ ಆಯೋಜಕರಿಗೆ ಹಿನ್ನಡೆ ಉಂಟಾಗಿದೆ. ನ್ಯಾಯಾಲಯದ ತಡೆಯಾಜ್ಞೆ ಬೆನ್ನಲ್ಲೇ ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜನರು ರದ್ದುಗೊಳಿಸಿದ್ದಾರೆ. ಕಾನೂನು ಮೂಲಕವೇ ಕೃತಿ ಬಿಡುಗಡೆಗೆ ಪ್ರಯತ್ನ ನಡೆಸಲಾಗುತ್ತದೆ ಎಂದಿದ್ದಾರೆ.
ಇನ್ನು ಸಿದ್ದು ನಿಜಕನಸು ಎಂಬ ಪುಸ್ತಕ ಬಿಡುಗಡೆ ಸಮಾರಂಭ ನಡೆಸಲು ನಿರ್ಧರಿಸಿರುವ ಪುರಭವನದ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಎಲ್ಲರನ್ನೂ ತಪಾಸಣೆ ನಡೆಸಿಯೇ ಪುರಭವನದ ಒಳಗೆ ಪ್ರವೇಶ ನೀಡಲಾಗಿತ್ತು. ಇದಕ್ಕೂ ಮೊದಲು ಕಾಂಗ್ರೆಸ್ನ ನೂರಾರು ಕಾರ್ಯಕರ್ತರು ಪುರಭವನದ ಎದುರು ಪ್ರತಿಭಟನೆ ನಡೆಸಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಆದರೆ ಕೊನೆ ಕ್ಷಣದಲ್ಲಿ ತಡೆಯಾಜ್ಞೆ ಬಂದ ಹಿನ್ನಲೆಯಲ್ಲಿ ಕೃತಿ ಬಿಡುಗಡೆ ಸಮಾರಂಭ ಮುಂದೂಡಲಾಗಿದೆ. "ಕಾನೂನಿಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ, ಭಾರತೀಯ ಸಂಸ್ಕೃತಿ ಹಾಗಾಗಿ ಕಾರ್ಯಕ್ರಮ ರದ್ದು ಮಾಡುತ್ತಿದ್ದು, ನಾವೂ ಕೋರ್ಟ್ ಮೊರೆ ಹೋಗಿ ಮತ್ತೆ ಪುಸ್ತಕ ಬಿಡುಗಡೆಗೆ ಪ್ರಯತ್ನಿಸುತ್ತೇವೆ" ಎಂದು ಆಯೋಜಕರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ " ನನ್ನ ತೇಜೋವಧೆ ಮಾಡಲು ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಇಂಥ ಪುಸ್ತಕಗಳನ್ನು (ಸಿದ್ದು ನಿಜ ಕನಸುಗಳು) ಹೊರತರುತ್ತಿದೆ’ ಎಂದು ದೂರಿದ್ದರು.