ಬೆಂಗಳೂರು, ಜ 09 ( DaijiworldNews/MS): ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಪಿಎಸ್ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿದ್ದ 26 ಆರೋಪಿಗಳಿಗೆ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಕಿಂಗ್ಪಿನ್ ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ, ಡಿವೈಎಸ್ಪಿ ಮಲ್ಲಿಕಾರ್ಜುನ ಸೇರಿದಂತೆ 26 ಜನರಿಗೆ ಕಲಬುರಗಿ ಸೆಷನ್ಸ್ ಕೋರ್ಟ್ ಜಾಮೀನು ನೀಡಿದೆ.
ಇದರ ಬೆನ್ನಲ್ಲೇ ಸರ್ಕಾರದ ಸಹಾಯದಿಂದ ಜಾಮೀನು ಪಡೆದು ಬಂದ ಆರೋಪಿಗಳಿಗೆ ಬಿಜೆಪಿ ಕಾರ್ಯಕರ್ತರಿಂದ ಭವ್ಯ ಸ್ವಾಗತ ದೊರಕಿದೆ ಎಂದು ಕಾಂಗ್ರೆಸ್ ಛೀಮಾರಿ ಹಾಕಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ , " ಭವಿಷ್ಯ ಕಳೆದುಕೊಂಡು ನೊಂದಿರುವ 56 ಸಾವಿರ ಅಭ್ಯರ್ಥಿಗಳನ್ನು ಅಣಕಿಸುವ ಚಿತ್ರವಿದು.ಬಿಜೆಪಿ ಸರ್ಕಾರದ ಭ್ರಷ್ಟಸ್ನೇಹಿ ನೀತಿಯನ್ನು ತೆರೆದಿಡುವ ಚಿತ್ರವಿದು.ಬಿಜೆಪಿಯ ನೀತಿಗೆಟ್ಟ ಆಡಳಿತಕ್ಕೆ ಕನ್ನಡಿಯಾದ ಚಿತ್ರವಿದು" ಎಂದು ಕಿಡಿಕಾರಿದೆ.
ರಾಜ್ಯದಲ್ಲಿ 2021 ರ ಅಕ್ಟೋಬರ್ ತಿಂಗಳಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆದಿತ್ತು. ಆದರೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿತ್ತು. 2022 ರ ಎಪ್ರಿಲ್ 8 ರಂದು ಕಲಬುರಗಿ ಚೌಕ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ತನಿಖೆ ಆರಂಭಿಸಿದ್ದ ಸಿಐಡಿ ಪೊಲೀಸರು ಇಲ್ಲಿವರಗೆ 53 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.