ಚಿತ್ರದುರ್ಗ, ಜ 09 ( DaijiworldNews/MS): ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಪೂಜೆ ಮಾಡಿದರೆ, ಅಥವಾ ವ್ಯಕ್ತಿಯನ್ನು ದೇವರನ್ನಾಗಿ ಮಾಡಿದರೆ ಅದು ಪ್ರಜಾಪ್ರಭುತ್ವವಾಗುವುದಿಲ್ಲ, ಇದನ್ನು ಸರ್ವಾಧಿಕಾರ ಎಂದು ಕರೆಯಲಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಮತ್ತು ಪ್ರಧಾನಮಂದ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಸಮುದಾಯಗಳ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಮಾಜದ ಎಲ್ಲಾ ವರ್ಗಗಳು, ವಿಶೇಷವಾಗಿ ಪರಿಶಿಷ್ಟ ಜಾರಿ ಮತ್ತುಪರಿಶಿಷ್ಟ ಪಂಗಡ ಹಾಗೂ ಇತರ ದುರ್ಬಲ ವರ್ಗಗಳು ಒಂದಾಗಬೇಕು ಎಂದು ಕರೆ ನೀಡಿದರು.
ಪ್ರತಿಯೊಂದಕ್ಕೂ ಮೋದಿ ಎನ್ನಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯನ್ನು ದೇವರನ್ನಾಗಿ ಮಾಡಿದರೆ ಅದು ಪ್ರಜಾಪ್ರಭುತ್ವವಾಗುವುದಿಲ್ಲ. ಅದು ನಿರಂಕುಶಾಧಿಕಾರ, ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ. ಬ್ರಿಟಿಷರು ಬಳಸಿದ ಮತ್ತು ಈಗ ಮೋದಿ ಬಳಸುತ್ತಿರುವ ಒಡೆದು ಆಳುವ ತತ್ವವನ್ನು ನಿಮ್ಮ ಮೇಲೆ ಹೇರುತ್ತಿದ್ದು, ನಿಮ್ಮಲ್ಲಿ ಶಕ್ತಿ ಇದ್ದರೆ ಒಗ್ಗಟ್ಟಾಗಿದ್ದರೆ ಇದರ ವಿರುದ್ದ ಹೋರಾಡಬಹುದು ಎಂದು ಹೇಳಿದರು.