ನವದೆಹಲಿ, ಜ 08 (DaijiworldNews/DB): ರೈತರ ಸಾಲಮನ್ನಾ ಆಗುತ್ತಿಲ್ಲ, ಬದಲಾಗಿ ಶತ ಕೋಟ್ಯಾಧೀಶರ ಸಾಲ ಮನ್ನಾ ಆಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಈ ಸಂಬಂಧ ಭಾನುವಾರ ಟ್ವೀಟ್ ಮಾಡಿರುವ ಅವರು, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದ ಬಿಜೆಪಿ ಬಳಿಕ ತನ್ನ ಮಾತು ಮರೆತಿದೆ. ರೈತರು ಬೆಳೆದ ಬೆಳೆಗಳಿಗೆ ಯಾವುದೇ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರ ಆದಾಯ ಸಂಪೂರ್ಣ ಕುಸಿದಿದ್ದು, ಹಣದುಬ್ಬರದಿಂದ ಸಂಕಷ್ಟ ಪಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದಾಯ ದ್ವಿಗುಣಗೊಳಿಸಲಾಗುವುದು ಎಂದು ಹೇಳಿ ಹಣದುಬ್ಬರವನ್ನು ರೈತರಿಗೆ ನೀಡಿದ್ದಾರೆ. ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಬದಲಾಗಿ ಶತ ಕೋಟ್ಯಾಧೀಶರ ಸಾಲಮನ್ನಾ ಮಾಡುತ್ತಿದ್ದಾರೆ ಎಂದು ಕೇಂದ್ರದ ವಿರುದ್ದ ಹರಿಹಾಯ್ದಿದ್ದಾರೆ.
ಕೃಷಿಕ ವಿರೋಧಿ ಕಾನೂನು ಮತ್ತು ರಫ್ತು ನಿಯಮಗಳನ್ನೇ ಅಸ್ತ್ರವಾಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ರೈತರ ಮೇಲೆ ದಾಳಿ ಮಾಡುತ್ತಿದ್ದಾರೆ. ಆದರೆ ರೈತರನ್ನು ಕೆಳಕ್ಕೆ ತಳ್ಳಿ ದೇಶ ಮುನ್ನಡೆಸುವುದು ಅಸಾಧ್ಯ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.