ಕೊಯಮತ್ತೂರು, ಜ 08 (DaijiworldNews/DB): ತಮಿಳುನಾಡು ಬಿಜೆಪಿಯಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ನಟಿ ಖುಷ್ಬೂ ಸುಂದರ್ ಹೇಳಿದ್ದಾರೆ.
ತಮಿಳುನಾಡು ಬಿಜೆಪಿ ಘಟಕದಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂಬ ನಟಿ-ರಾಜಕಾರಣಿ ಗಾಯತ್ರಿ ರಘುರಾಮ್ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಪಕ್ಷವನ್ನು ಎಲ್ಲಾ ಮಹಿಳೆಯರು ತೊರೆದಿಲ್ಲ. ನಾನೂ ಪಕ್ಷದಲ್ಲಿದ್ದೇನೆ. ನಾವೆಲ್ಲರೂ ಸುರಕ್ಷಿತವಾಗಿಯೇ ಇದ್ದೇವೆ ಎಂದರು.
ಗಾಯತ್ರಿ ರಘುರಾಮ್ ಕಳೆದ ನವೆಂಬರ್ನಲ್ಲಿ ಪಕ್ಷದಿಂದ ಅಮಾನತುಗೊಂಡರು. ಇತ್ತೀಚೆಗೆ ಅವರು ರಾಜೀನಾಮೆ ನೀಡಿದ್ದಾರೆ. ಈ ವೇಳೆ ಅವರು ಅಣ್ಣಾಮಲೈ ಅವರನ್ನು ದೂಷಿಸಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದಿದ್ದಾರೆ. ಆದರೆ ಅಂತಹ ಯಾವುದೇ ಅಸುರಕ್ಷಿತ ಭಾವನೆ ಬಿಜೆಪಿಯಲ್ಲಿಲ್ಲ. ಪಕ್ಷ ತೊರೆದವರ ಬಗ್ಗೆ ನನಗೆ ವಿಷಾದವಿಲ್ಲ ಎಂದು ತಿಳಿಸಿದರು.
ಅಣ್ಣಾಮಲೈ ಅವರು ಧೈರ್ಯಶಾಲಿ. ಡಿಎಂಕೆಯ ಕೆಲವರು ನನ್ನ ವಿರುದ್ದ ಕೆಲಸ ಮಾಡಿದಾಗ ಬಿಜೆಪಿ ಮತ್ತು ಅಣ್ಣಾಮಲೈ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದವರು ಇದೇ ವೇಳೆ ನೆನಪಿಸಿಕೊಂಡರು.