ಬೆಂಗಳೂರು, ಜ 08 (DaijiworldNews/DB): ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರೇ ಒಬ್ಬ ರಾಜಕಾರಣಿಯಾದರೂ ಪ್ರೌಢತೆಯಿಂದ ಇರುವಿರೇ? ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಎಎಪಿ, ನಾಯಿ, ನರಿ ಎಂದುಕೊಂಡೇ ಇರಿ. ಮೂರು ಬಿಟ್ಟವರು, ರಾಜಕಾರಣಿಗಳಾಗುವರು ಅನ್ನುವಂತೆ ಆಗಿದೆ. ರಾಜಕಾರಣವನ್ನು ಇಷ್ಟು ಕೀಳು ಮಟ್ಟಕ್ಕೆ ಇಳಿಸಿದ ಖ್ಯಾತಿ ನಿಮ್ಮಗಳದ್ದು. ನಿಮಗೆಲ್ಲ ದಮ್ಮು ತಾಕತ್ತು ಇದ್ರೆ ಜನರ ಸಮಸ್ಯೆ ಬಗ್ಗೆ ಮಾತಾಡಿ ಎಂದು ಸವಾಲೆಸೆದಿದೆ.
ಕಾಂಗ್ರೆಸ್ನವರ ದಮ್ಮು, ತಾಕತ್ತು ಬಗ್ಗೆ ಮಾತನಾಡುವ ಬೊಮ್ಮಾಯಿಯವರು ಮೋದಿಯವರ ಎದುರು ನಾಯಿ ಮರಿಯಂತೆ ಇರುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಇನ್ನು ಇದಕ್ಕೆ ತಿರುಗೇಟು ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದ ಜನಸೇವೆಯಲ್ಲಿರುವ ನಿಯತ್ತಿನ ನಾಯಿ ನಾನು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಅಧಿಕಾರ, ಅವಕಾಶ ಸಿಕ್ಕಿದ ಕಾರಣಕ್ಕೇ ತಿನ್ನುವ ತೋಳ ನಾನಾಗಲಾರೆ. ನಾಯಿ ವೇಷದ ತೋಳಗಳು ಯಾರು ಎಂಬುದು ಜನರಿಗೆ ಗೊತ್ತಿದೆ ಎಂದಿದ್ದರು.
ಇನ್ನು ಇದೇ ವೇಳೆ ಸಿದ್ದರಾಮಯ್ಯನವರ ಮಾತಿಗೆ ತಿರುಗೇಟು ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು, ಸೋನಿಯಾ ಎದುರು ಕೈಕಟ್ಟಿ ಕುಳಿತುಕೊಳ್ಳುತ್ತಿದ್ದ ಸಿದ್ದರಾಮಯ್ಯನವರನ್ನು ಪೊಮೊರಿಯನ್ ನಾಯಿ ಎನ್ನುವುದಕ್ಕಾಗುತ್ತದೆಯೇ ಎಂದು ಪ್ರಶ್ನಿಸಿದ್ದರು.