ಡೆಹ್ರಾಡೂನ್, ಜ 08 (DaijiworldNews/DB): ಪರೀಕ್ಷೆ ಕುರಿತು ವಿದ್ಯಾರ್ಥಿನಿಯೊಬ್ಬಳು ಬರೆದ ಕವನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕವನದ ಕುರಿತು ಈ ಬಾರಿಯ ಪರೀಕ್ಷಾ ಪೇ ಚರ್ಚಾದಲ್ಲಿ ಮಾತನಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಡೆಹ್ರಾಡೂನ್ನ ಕೇಂದ್ರೀಯ ವಿದ್ಯಾಲಯ (ಕೆವಿ) ಒಎನ್ಜಿಸಿ ವಿದ್ಯಾರ್ಥಿನಿ ಕೆ.ಎಂ. ದಿಯಾ ಅವರ ಕವನಗಳೇ ಪ್ರಧಾನಿ ಮೋದಿಯಿಂದ ಶ್ಲಾಘಿಸಲ್ಪಟ್ಟಿರುವುದು. ವಿದ್ಯಾರ್ಥಿನಿ ಪರೀಕ್ಷೆ ಸಂಬಂಧ ಬರೆದು ವಾಚಿಸಿದ್ದ ಕವನವನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆಯು ಟ್ವೀಟ್ ಮಾಡಿತ್ತು. ಈ ಟ್ವೀಟ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ ತುಂಬಾ ಸೃಜನಶೀಲವಾಗಿವೆ ಎಂದು ಶ್ಲಾಘಿಸಿದ್ದಾರೆ. ಒತ್ತಡ ಮುಕ್ತ ಪರೀಕ್ಷೆಗಳೇ ಅತ್ಯುತ್ತಮವಾದ ಪರೀಕ್ಷೆಗಳು. ಇದೇ ತಿಂಗಳು 27ರಂದು ನಡೆಯುವ ಪರೀಕ್ಷಾ ಪೇ ಚರ್ಚಾ ಸಮಯದಲ್ಲಿ ಇದರ ಕುರಿತು ನಾವು ಮಾತನಾಡುತ್ತೇವೆ ಎಂದು ಮೋದಿ ಹೇಳಿದ್ದಾರೆ.
ನವದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಜನವರಿ 27ರಂದು ನಡೆಯುವ ಪರೀಕ್ಷಾ ಪರ್ ಚರ್ಚಾ' 6 ನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. 31.24 ಲಕ್ಷ ವಿದ್ಯಾರ್ಥಿಗಳು, 5.60 ಲಕ್ಷ ಶಿಕ್ಷಕರು ಮತ್ತು 1.95 ಲಕ್ಷ ಪೋಷಕರು ಸೇರಿ ಒಟ್ಟು 38.80 ಲಕ್ಷ ಮಂದಿ ಭಾಗವಹಿಸಲಿದ್ದಾರೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.