ನವದೆಹಲಿ, ಜ 08 (DaijiworldNews/HR): ಕುಟುಂಬವೊಂದು ಸಿಕಂದರಾಬಾದ್-ಅಗರ್ತಲಾ ವಿಶೇಷ ರೈಲು ಕೋಚ್ನಲ್ಲಿ ಪ್ರಯಾಣಿಸುತ್ತಿದ್ದು, ಈ ವೇಳೆ ಆ ಕುಟುಂಬದ ಮಗುವೊಂದು ಆಟಿಕೆಯೊಂದಿಗೆ ಆಟವಾಡುತ್ತಿತ್ತು. ಕುಟುಂಬವು ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಅಲಿಯಾಬುರಿ ರೈಲು ನಿಲ್ದಾಣದಲ್ಲಿ ಇಳಿದಿದೆ. ಆದರೆ ರೈಲಿನಿಂದ ಇಳಿಯುವಾಗ ಕುಟುಂಬ ಸದಸ್ಯರು ಆಟಿಕೆ ತೆಗೆದುಕೊಂಡು ಹೋಗುವುದನ್ನು ಮರೆತಿದ್ದು, ಅದನ್ನು ಸ್ವತಃ ರೈಲ್ವೆ ಅಧಿಕಾರಿಗಳೇ ಮನೆ ಬಾಗಿಲಿಗೆ ತಲುಪಿಸಿರುವ ಘಟನೆ ನಡೆದಿದೆ.
ಇನ್ನು ಇದನ್ನು ಗಮನಿಸಿದ ಸಹ ಪ್ರಯಾಣಿಕ ಭೂಸಿನ್ ಪಟ್ನಾಯಕ್, ಮಗುವಿನ ಆಟಿಕೆಯನ್ನು ಹೇಗಾದರೂ ಮಾಡಿ ಅವರಿಗೆ ತಲುಪಿಸಬೇಕೆಂದು ಬಯಸಿದ್ದರು. ಕೂಡಲೇ 'ರೈಲ್ ಮದದ್' ಆಯಪ್ ಮೂಲಕ 139ಕ್ಕೆ ಕರೆ ಮಾಡಿ ಸಿಕಂದರಾಬಾದ್ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆ ಕುಟುಂಬದ ಬಗ್ಗೆ ಯಾವುದೇ ವಿವರ ಗೊತ್ತಿಲ್ಲ. ಸೀಟ್ ನಂಬರ್ (ಬಿ-2 ಕೋಚ್, ಸೀಟ್ ನಂಬರ್ 19)ಮಾತ್ರ ಗೊತ್ತಿತ್ತು ಎಂದರು. ಆ ಸೀಟ್ ನಂಬರ್ ಆಧರಿಸಿ ಸಿಕಂದರಾಬಾದ್ ರೈಲ್ವೆ ಅಧಿಕಾರಿಗಳು ವಿವರಗಳನ್ನು ಪಡೆದು, ಮೋಹಿತ್ ಮತ್ತು ನಸ್ರೀನ್ ಬೇಗಂ ಆ ಸೀಟಿನಲ್ಲಿ ಪ್ರಯಾಣಿಸಿರುವುದು ಕಂಡುಬಂದಿದೆ.
ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಖಾಜಿಗಾಂವ್ ಅವರ ಹುಟ್ಟೂರಾಗಿದ್ದು, ಅದರ ನಂತರ ರೈಲಿನ ಲೈವ್ ಸ್ಥಳವನ್ನು ಪತ್ತೆಹಚ್ಚಲಾಯಿತು. ನ್ಯೂ ಜಲ್ಪೈ ಗುರಿ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿ ರೈಲ್ವೆ ಸಿಬ್ಬಂದಿ ಟ್ರಕ್ನ ಆಟಿಕೆಯನ್ನು ಬುಸಿನ್ನಿಂದ ತೆಗೆದುಕೊಂಡರು. ಆ ನಂತರ ಅಲಿಯಾಬುರಿ ನಿಲ್ದಾಣಕ್ಕೆ 20 ಕಿ.ಮೀ. ದೂರದಲ್ಲಿದ್ದ ತಮ್ಮ ಮನೆಗೆ ಹೋದ ಹುಡುಗನಿಗೆ ಆಟಿಕೆಯನ್ನು ತಲುಪಿಸಿದೆ.