ಮೈಸೂರು, ಜ 07 (DaijiworldNews/DB): ಸಿ.ಟಿ. ರವಿ ನಾನು. ಸ್ಯಾಂಟ್ರೋ ರವಿ ಯಾರೆಂದು ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಸ್ಯಾಂಟ್ರೋ ರವಿ ವಿಚಾರವಾಗಿ ಶನಿವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕ ಜೀವನ ಎಂದ ಮೇಲೆ ಯಾರ್ಯಾರೋ ಬಂದು ರಾಜಕಾರಣಿಗಳೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಾರೆ. ಆದರೆ ಅವರೆಲ್ಲರೊಂದಿಗೆ ಸಂಬಂಧ ಕಲ್ಪಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ಎಚ್.ಡಿ. ಕುಮಾರಸ್ವಾಮಿಯವರೊಂದಿಗೆ ಐಎಂಎ ಪ್ರಕರಣದ ಆರೋಪಿ ಫೋಟೋ ತೆಗೆಸಿಕೊಂಡಿದ್ದ. ಆದರೆ ಆತ ಫೋಟೋ ತೆಗೆಸಿಕೊಂಡಿದ್ದ ಎಂಬ ಕಾರಣಕ್ಕಾಗಿ ಎಚ್ಡಿಕೆಯವರು ಕಿಂಗ್ಪಿನ್ ನಂಬರ್-2 ಎನ್ನಲಾಗುತ್ತದೆಯೇ? ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಅವರೊಂದಿಗೆ ನಿಕಟ ಸಂಬಂಧ ಇದೆ ಎನ್ನುವುದು ತಪ್ಪು. ಹೆಸರು ಕೆಡಿಸಲು ಹಲವರಿರುತ್ತಾರೆ ಎಂದು ಕಿಡಿ ಕಾರಿದರು.
ತಾಂತ್ರಿಕ ಮತ್ತು ವ್ಯಾವಹಾರಿಕ ಸಹಕಾರವನ್ನು ಮುಂದಿಟ್ಟುಕೊಂಡು ಅಮುಲ್-ನಂದಿನಿ ಒಂದಾಗಬಹುದೆಂಬ ವಿಚಾರವನ್ನು ಅಮಿತ್ ಶಾ ಹೇಳಿದ್ದರು. ಆದರೆ ಮೊಸರಲ್ಲಿ ಕಲ್ಲು ಹುಡುಕುವ ಅಭ್ಯಾಸವಿರುವ ವಿಪಕ್ಷಗಳು ಅವುಗಳ ವಿಲೀನವೇ ಆಯಿತು ಎಂಬಂತೆ ಹೇಳುತ್ತಿವೆ. ಭಾರತ-ರಷ್ಯಾ, ಭಾರತ-ಅಮೆರಿಕಾ ಜಂಟಿ ಸಮರಾಭ್ಯಾಸ ನಡೆಸಿದರೆ ಅವೆರಡು ಒಂದೇ ದೇಶ ಎಂದು ಹೇಳಲಾಗುತ್ತದೆಯೇ ಎಂದು ಸಿ.ಟಿ. ಪ್ರಶ್ನಿಸಿದರು.