ಬೆಂಗಳೂರು, ಜ 07 (DaijiworldNews/DB): ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕ ಟ್ಯಾಬ್ಲೋಗೆ ಈ ಬಾರಿಯೂ ಅವಕಾಶ ನಿರಾಕರಿಸಿರುವುದು ರಾಜ್ಯಕ್ಕೆ ಕೇಂದ್ರ ಮಾಡುತ್ತಿರುವ ಅನ್ಯಾಯಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ವಿಶ್ವದಲ್ಲೇ ಶ್ರೇಷ್ಠ ಇತಿಹಾಸ ಹೊಂದಿದ ಹೆಗ್ಗಳಿಕೆ ಕರ್ನಾಟಕಕ್ಕಿದೆ. ರಾಜ್ಯದ ಇತಿಹಾಸದ ಪರಿಚಯ ಮಾಡಲು ಈ ಹಿಂದೆಲ್ಲಾ ಭಾರತ ಸರ್ಕಾರ ಅವಕಾಶ ಮಾಡಿಕೊಡುತ್ತಿತ್ತು. ಆದರೆ ಈಗ ಟ್ಯಾಬ್ಲೋಗೆ ಅವಕಾಶ ನೀಡದಿರುವುದು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯಕ್ಕೆ ಸಾಕ್ಷಿ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರ ಗುಜರಾತ್ಗೆ ಆದ್ಯತೆ ನೀಡುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದು ಹೊಸತಲ್ಲ. ಏರೋಸ್ಪೇಸ್ನ್ನೂ ಸ್ಥಳಾಂತರ ಮಾಡಲು ಹೊರಟಿದ್ದರು. ರಾಜ್ಯಕ್ಕೆ ಇಂತಹ ಅನ್ಯಾಯವಾದಾಗ ಕೇಳುವವರೇ ಇಲ್ಲದಾಗಿದೆ. ಡಬಲ್ ಆಕ್ಟಿಂಗ್ ಮಾಡುವುದೇ ಡಬಲ್ ಇಂಜಿನ್ ಸರ್ಕಾರದ ಕೆಲಸವಾಗಿದೆ ಎಂದು ಕಿಡಿ ಕಾರಿದರು.