ನವದೆಹಲಿ, ಜ 07 (DaijiworldNews/DB): ತನ್ನ ಲಿವ್ ಇನ್ ಸಂಗಾತಿ ಶ್ರದ್ದಾಳನ್ನು ಹತ್ಯೆಗೈದು 35 ತುಂಡುಗಳನ್ನಾಗಿ ಕತ್ತರಿಸಿ ವಿವಿಧೆಡೆ ಬಿಸಾಡಿ, ಇದೀಗ ಜೈಲು ಸೇರಿರುವ ಆರೋಪಿ ಅಫ್ತಾಬ್ ಪೂನಾವಾಲ ನ್ಯಾಯಾಲಯದ ಮುಂದೆ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾನೆ. ಜೈಲಿನಲ್ಲಿ ಚಳಿ ಇದ್ದು, ಬಟ್ಟೆ ಖರೀದಿಸಲು ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನೀಡಿ ಎಂದು ಅರ್ಜಿ ಬರೆದಿದ್ದಾನೆ!
ಶ್ರದ್ದಾ ವಾಕರ್ ಕೊಲೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲನಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ. ಈ ನಡುವೆ ಆತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾನೆ. ಜೈಲಿನಲ್ಲಿ ಚಳಿ ತುಂಬಾ ಇದೆ. ನನ್ನ ಕುಟುಂಬದವರೊಂದಿಗೆ ನಾನು ಸಂಪರ್ಕ ಕಡಿದುಕೊಂಡಿದ್ದೇನೆ. ನನಗೆ ಚಳಿಯಿಂದ ರಕ್ಷಿಸಿಕೊಳ್ಳುವ ಬಟ್ಟೆಯನ್ನೂ ನೀಡಿಲ್ಲ. ಹೀಗಾಗಿ ನಾನೇ ಬಟ್ಟೆ ಖರೀದಿಸಬೇಕು. ಅದಕ್ಕೆ ನನಗೆ ಹಣದ ಅಗತ್ಯ ಇದೆ. ಸ್ವೆಟರ್ ಖರೀದಿಸಲು ನನಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನೀಡಿ ಎಂದು ಅರ್ಜಿಯಲ್ಲಿ ಬರೆದಿದ್ದಾನೆ.
2018ರಲ್ಲಿ ಡೇಟಿಂಗ್ ಆಪ್ ಮೂಲಕ ಶ್ರದ್ದಾಳನ್ನು ಪರಿಚಯಿಸಿಕೊಂಡಿದ್ದ ಅಫ್ತಾಬ್ ಬಳಿಕ ಆಕೆಯೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದ. ಆದರೆ 2022ರ ಮೇ 18ರಂದು ದೆಹಲಿಯ ಬಾಡಿಗೆ ಫ್ಲಾಟ್ನಲ್ಲಿ ಆಕೆಯನ್ನು ಹತ್ಯೆಗೈದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ಪ್ರತಿದಿನ ದೆಹಲಿಯ ಅರಣ್ಯದಲ್ಲಿ ಎಸೆದಿದ್ದ. ಬಳಿಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ನವೆಂಬರ್ 19ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.