ಚಂಡೀಗಢ, ಜ 07 (DaijiworldNews/DB): ಅಗ್ನಿಪಥ್ ಯೋಜನೆಯ ಮೂಲಕ ದೇಶದ ಯುವಕರ ವೃತ್ತಿ ಭವಿಷ್ಯವನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಹರಿಯಾಣದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತದ ಮೊದಲ ದಿನದ ರ್ಯಾಲಿಯಲ್ಲಿ ಮಾತನಾಡಿದ ಅವರು, ಅಗ್ನಿವೀರ್ ತಮಗೆ ಇಷ್ಟವಿಲ್ಲ ಎಂದು ಹೇಳಿದರೆ ಯಾವುದೇ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂಬ ಭಯದಿಂದಾಗಿ ಯುವಕರು ಇದರ ಬಗ್ಗೆ ಮಾತನಾಡಲು ಹೋಗುತ್ತಿಲ್ಲ. ಆದರೆ ರ್ಯಾಲಿ ವೇಳೆ ಹಲವು ಯುವಕರನ್ನು ನಾನು ಭೇಟಿ ಮಾಡಿದ್ದೇನೆ. ಆಗೆಲ್ಲ ಅವರು ಅಗ್ನಿಪಥ ಯೋಜನೆ ಮೂಲಕ ನಮ್ಮ ಭವಿಷ್ಯ ಹಾಳು ಮಾಡಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ ಎಂದರು.
ಅಗ್ನಿವೀರ್ ಯೋಜನೆಯನ್ನು ಟೀಕಿಸಿದರೆ ಸೇನಾ ವಿರೋಧಿ, ರಕ್ಷಣಾ ಪಡೆಗಳ ವಿರುದ್ದ ಮಾತನಾಡುತ್ತೇನೆ ಎಂದು ನನ್ನನ್ನು ಬಿಜೆಪಿಯುವರು ಜರೆಯುತ್ತಾರೆ. ದೇಶದ ರಕ್ಷಣಾ ಪಡೆಗಳ ಮೇಲೆ ನನಗೆ ಸಂಪೂರ್ಣ ನಂಬಿಕೆ, ಗೌರವ ಇದೆ ಎಂದ ಅವರು, ತಮ್ಮನ್ನು ತಾವು ದೇಶಭಕ್ತರು ಎಂದುಕೊಳ್ಳುವ ಬಿಜೆಪಿಗರ ನಿಜವಾದ ದೇಶಭಕ್ತಿ ಏನೆಂಬುದು ಗೊತ್ತಾಗುತ್ತಿಲ್ಲ ಎಂದು ಕಿಡಿ ಕಾರಿದರು.
ಮೊದಲು ಅಗ್ನಿಪಥ್ ಯೋಜನೆ ಏನೆಂದು ತಿಳಿಸಿ. ರಾಷ್ಟ್ರದ ಯುವ ಶಕ್ತಿಯ ಸಾಮರ್ಥ್ಯವನ್ನು ವೃಥಾ ವ್ಯರ್ಥ ಮಾಡಬೇಡಿ ಎಂದರು.