ನವದೆಹಲಿ, ಜ 07 (DaijiworldNews/DB): 2024ರ ಜನವರಿ 1ರ ವೇಳೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಮುಗಿದು, ಉದ್ಘಾಟನೆಗೊಳ್ಳಲಿದೆ ಎನ್ನಲು ಅಮಿತ್ ಶಾ ಅವರು ಪೂಜಾರಿಯೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಅಂಗವಾಗಿ ಪಾಣಿಪತ್ ನಲ್ಲಿ ಮಾತನಾಡಿದ ಅವರು, 2024ರ ಜನವರಿ 1ರೊಳಗೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡು ಉದ್ಘಾಟನೆ ನಡೆಯಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ ಅದೇ ದಿನ ನಿರ್ಮಾಣ ಕಾರ್ಯ ಅಂತಿಮಗೊಳ್ಳಲಿದೆ ಎನ್ನಲು ಅವರೇನು ಪೂಜಾರಿಯೇ ಅಥವಾ ಮಹಾಂತರೇ ಎಂದು ಪ್ರಶ್ನಿಸಿದರು.
ದೇವರ ಮೇಲೆ ಪ್ರತಿಯೊಬ್ಬರಿಗೂ ನಂಬಿಕೆ ಇದೆ. ಆದರೆ ತ್ರಿಪುರಾ ವಿಧಾನಸಭಾ ಚುನಾವಣೆ ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆ ಸನ್ನಿಹಿತವಾಗುತ್ತಿರುವಾಗ ಅಮಿತ್ ಶಾ ಅವರು ಈ ಘೋಷಣೆ ಮಾಡಲು ಕಾರಣವೇನು ಎಂದು ಕೇಳಿದ್ದಾರೆ.
ಅಮಿತ್ ಶಾ ಅವರೊಬ್ಬ ರಾಜಕಾರಣಿ ಮತ್ತು ಸಚಿವ. ದೇಶದ ರಕ್ಷಣೆ, ಅಭಿವೃದ್ದಿ ಅವರ ಕರ್ತವ್ಯ. ಅದು ಬಿಟ್ಟು ಇದೇ ದಿನಾಂಕದಂದು ರಾಮ ಮಂದಿರ ನಿರ್ಮಾಣ ಮುಗಿದಿರುತ್ತದೆ ಎಂದು ಹೇಳಲು ಅವರೇನು ಪೂಜಾರಿಯೂ ಅಲ್ಲ, ಮಹಾಂತರೂ ಅಲ್ಲ ಎಂದು ಖರ್ಗೆ ಹರಿಹಾಯ್ದರು.