ಉತ್ತರಾಖಂಡ, ಜ 06 ( DaijiworldNews/MS): ಉತ್ತರಾಖಂಡದ ಬೆಟ್ಟದ ಜೋಶಿಮಠ ಪಟ್ಟಣದಲ್ಲಿ ಸ್ಥಳೀಯರ ಮನೆಗಳು ಹಾಗೂ ದೇವಾಲಯಗಳು ಬಿರುಕು ಬಿಟ್ಟು , ಕುಸಿದುಬಿದ್ದ ಘಟನೆಗಳು ವರದಿಯಾಗಿವೆ. ಇದರಿಂದಾಗಿ ಒಟ್ಟು 3 ಸಾವಿರ ಮಂದಿಗೆ ತೊಂದರೆಯಾಗಿದೆ. 570 ಮನೆಗಳಲ್ಲಿ ಬಿರುಕುಗಳು ಬಿಟ್ಟಿರುವ ಹಿನ್ನೆಲೆಯಲ್ಲಿ ಅವುಗಳಲ್ಲಿ ವಾಸಿಸುತ್ತಿರುವರು ಆತಂಕಗೊಂಡಿದ್ದಾರೆ.
ಸುಮಾರು 1890 ಮೀಟರ್ ಎತ್ತರದಲ್ಲಿರುವ ಜೋಶಿಮಠವು ಹಿಮಾಲಯದ ಘರ್ವಾಲ್ನ ಒಂದು ಪಟ್ಟಣವಾಗಿದ್ದು, ಕುಸಿಯುತ್ತಿರುವ ಹಿನ್ನೆಲೆಯಲ್ಲಿಸುಮಾರು 600 ಕುಟುಂಬಗಳ ತಕ್ಷಣದ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿದೆ.
2021ರ ಫೆಬ್ರವರಿಯಲ್ಲಿ ಜೋಶಿಮಠ ಸಮೀಪದ ತಪೋವನ ವಿಷ್ಣುಗಡದಲ್ಲಿನ ಅಣೆಕಟ್ಟೆಯ ಸಮೀಪ ಸಂಭವಿಸಿದ್ದ ಮೇಘಸ್ಫೋಟದಲ್ಲಿ ನೂರಾರು ಮಂದಿ ಮೃತಪಟ್ಟಿದ್ದರು. ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿರುವುದು ಕೂಡ ಜೋಶಿಮಠ ಹಾಗೂ ಉತ್ತರಾಖಂಡದ ಇತರ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಹಿಮಕರಗಿ ಬರುವ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಮಣ್ಣು ಬಿರುಕುಬಿಡುತ್ತದೆ. ಪರಿಣಾಮವಾಗಿ ಭೂಕುಸಿತದಂಥ ಘಟನೆಗಳು ಸಂಭವಿಸುತ್ತಿವೆ ಎನ್ನಲಾಗಿದೆ.
ಜೋಶಿಮಠದಲ್ಲಿ ಭೂ ಕುಸಿತದ ಕುರಿತು ‘ಕ್ಷಿಪ್ರ ಅಧ್ಯಯನ’ ನಡೆಸಲು ಕೇಂದ್ರವು ಸಮಿತಿಯನ್ನು ರಚಿಸಿದೆ. ಸಮಿತಿಯು ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇಂದ್ರ ಜಲ ಆಯೋಗ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಪ್ರತಿನಿಧಿಗಳನ್ನು ಒಳಗೊಂಡಿದೆ.