ಶಿರಾ, ಜ 07 ( DaijiworldNews/MS): ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮುಂದೆ ಕೈಕಟ್ಟಿ ನಿಲ್ಲುವ ಸಿದ್ದರಾಮಯ್ಯನವರಿಂದ ನಾವು ಪಾಠ ಕಲಿಯಬೇಕಾಗಿಲ್ಲ. ನರೇಂದ್ರ ಮೋದಿಯವರು ಕೇಳದೇ ಕೊಡುವ ಕಾಮಧೇನುವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಅವರು ಇಂದು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಶಿರಾದ ಪ್ರೆಸಿಡೆನ್ಸಿ ಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ “ಸಾರ್ವಜನಿಕ ಸಭೆ”ಯಲ್ಲಿ ಪಾಲ್ಗೊಂಡು ಮಾತನಾಡಿ, " ಯಾರನ್ನು ಹುಲಿ , ಯಾರನ್ನು ಇಲಿ ಮಾಡುವ ಮಂತ್ರದಂಡ ಕರ್ನಾಟಕ ಜನತೆಯ ಕೈಯಲ್ಲಿದೆ. ಕಾಂಗ್ರೆಸ್ ನವರು ಇಲಿ ಅಥವಾ ಹುಲಿಯಾಗುವ ಬಗ್ಗೆ ಜನ ತೀರ್ಮಾನಿಸಲಿದ್ದಾರೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರು ನರೇಂದ್ರ ಮೋದಿಯವರ ಕೊಡುಗೆ ಏನು, ಎಂದು ಪ್ರಶ್ನಿಸಿ ನನ್ನನ್ನು ನಾಯಿಮರಿಗೆ ಹೋಲಿಸಿದ್ದಾರೆ. ನರೇಂದ್ರ ಮೋದಿಯವರು ಅಪ್ಪಟ ಪ್ರಜಾಪ್ರಭುತ್ವವಾದಿ. ರಾಜ್ಯಗಳ ಸ್ವಾಯತ್ತತೆ, ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳವರು. ಹಲವಾರು ಯೋಜನೆಗಳನ್ನು ಒದಗಿಸಿದ್ದಾರೆ. 15 ನೇ ಹಣಕಾಸಿನ ಯೋಜನೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಜಾರಿಗೆ ಬಂತು. ರಾಜ್ಯದ ಯೋಜನೆಗಳು, ಅವಶ್ಯಕತೆಗಳ ಬಗ್ಗೆ ಸರಿಯಾಗಿ ವಾದಿಸಲಿಲ್ಲ. ಅವರ ಮುಂದೆ ರಾಜ್ಯದ ಚಿತ್ರಣವನ್ನು ನೀಡಲಿಲ್ಲವಾದ್ದರಿಂದ ನಮಗೆ 15 ನೇ ಹಣಕಾಸಿನಲ್ಲಿ ಅನುದಾನ ಕಡಿಮೆಯಾಗಿದೆ. ಇದಕ್ಕೆ ನೇರವಾಗಿ ಅವರೇ ಕಾರಣ ಎಂದು ಹೇಳಿದ್ದಾರೆ.
ಮಧ್ಯಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಶಕ್ತಗೊಳಿಸಲು ಜೊತೆಗೆ ಭಾಜಪ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ನೇತೃತ್ವದಲ್ಲಿ ತುಮಕೂರಿನೆಲ್ಲೆಡೆ ಕಮಲ ಅರಳಲಿದೆ. ಶಿರಾ ಭಾಗದ ಕೆರೆ ಯೋಜನೆಗಳ ಅನುಷ್ಠಾನಕ್ಕೆ ಬದ್ಧವಾಗಿದ್ದೇವೆ. ಜನಸಂಕಲ್ಪ ಯಾತ್ರೆ ವಿಜಯಸಂಕಲ್ಪ ಯಾತ್ರೆಯಾಗಿ ಪರಿವರ್ತನೆಯಾಗಲಿದ್ದು, ಜನರ ಆಶೀರ್ವಾದ ಇರಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಚಿವರಾದ ಆರ್. ಅಶೋಕ್ ಹಾಗೂ ಮತ್ತಿತರರು ಹಾಜರಿದ್ದರು.