ನವದೆಹಲಿ, ಜ 06 (DaijiworldNews/DB): ದೆಹಲಿಯ ಶ್ರದ್ದಾ ವಾಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲನ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿಯ ಸಾಕೇತ್ ಕೋರ್ಟ್ ನಾಲ್ಕು ದಿನಗಳವರೆಗೆ ವಿಸ್ತರಣೆ ಮಾಡಿ ಆದೇಶಿಸಿದೆ.
ಆರೋಪಿಯನ್ನು ಜನವರಿ 10ರಂದು ಭೌತಿಕವಾಗಿ ಹಾಜರುಪಡಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ದೆಹಲಿಯ ಮೆಹ್ರೋಲಿಯಲ್ಲಿ ಮೇ 18ರಂದು ಆಕೆಯ ಲಿವ್ ಇನ್ ಸಂಗಾತಿ ಅಫ್ತಾಬ್ ಹತ್ಯೆಗೈದಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ವಿವಿಧೆಡೆ ಎಸೆದಿದ್ದ. ಈ ಪ್ರಕರಣ ಹಲವು ತಿಂಗಳುಗಳ ಬಳಿಕ ಬೆಳಕಿಗೆ ಬಂದಿದ್ದು, ಆರೋಪಿ ಅಫ್ತಾಬ್ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಇದೀಗ ಆತನ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ನಾಲ್ಕು ದಿನ ವಿಸ್ತರಿಸಲಾಗಿದೆ.
ಶ್ರದ್ದಾ ವಾಕರ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಮೆಹ್ರೌಲಿ ಮತ್ತು ಗುರುಗ್ರಾಮ್ ಅರಣ್ಯದಿಂದ ಸಂಗ್ರಹಿಸಿದ್ದ ಕೆಲವು ಮೂಳೆಗಳನ್ನು ಪರೀಕ್ಷೆಗೊಳಪಡಿಸಿದಾಗ ಶ್ರದ್ದಾ ತಂದೆ ಮತ್ತು ಸಹೋದರನ ಡಿಎನ್ಎಯೊಂದಿಗೆ ಹೊಂದಿಕೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.