ಚಿಕ್ಕಮಗಳೂರು, ಜ 06 (DaijiworldNews/DB): ಜೆಡಿಎಸ್ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ವೈ.ಎಸ್.ವಿ. ದತ್ತ ಕಾಂಗ್ರೆಸ್ ಸೇರ್ಪಡೆಗೊಳ್ಳುವುದಕ್ಕೆ ದಿನಾಂಕ ಘೋಷಿಸಿದ್ದಾರೆ. ಜನವರಿ 15ರ ಬಳಿಕ ಕಾಂಗ್ರೆಸ್ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡುವುದಾಗಿ ಕಡೂರು ತಾಲೂಕಿನ ಸ್ವಗ್ರಾಮದಲ್ಲಿ ಘೋಷಣೆ ಮಾಡಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಮತ್ತು ನನ್ನದು ತಂದೆ ಮಗನ ಸಂಬಂಧ. ಕಳೆದೈದು ದಶಕಗಳಿಂದ ಅವರೊಂದಿಗೆ ಇರುವ ಭಾವನಾತ್ಮಕ ಸಂಬಂಧದಿಂದಾಗಿ ನನ್ನ ಮೇಲೆ ಅವರ ಆಶೀರ್ವಾದ ಸದಾ ಇರುತ್ತದೆ ಎಂಬುದು ತಿಳಿದಿದೆ. ವಿಧಾನ ಪರಿಷತ್ ಸದಸ್ಯನಾಗುವ ಅವಕಾಶ ಕಲ್ಪಿಸಿಕೊಟ್ಟಿರುವ ಅವರು ನನ್ನನ್ನು ಸಾಕಷ್ಟು ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ. ಆದರೆ ಇದೀಗ ರಾಜಕೀಯ ಜೀವನದ ತಿರುವಿಗೆ ಅನಿವಾರ್ಯವಾಗಿ ಒಗ್ಗಿಕೊಳ್ಳುತ್ತಿದ್ದೇನೆ ಎಂದರು.
ಕಾಂಗ್ರೆಸ್ಗೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಜೀವನದ ಮತ್ತೊಂದು ತಿರುವಿಗೆ ಹೋಗುತ್ತಿದ್ದೇನೆ. ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ದೇವೇಗೌಡರಿಗೆ ಹೇಳಲು ಅಳುಕಿದೆ. ಆದರೆ ನನ್ನ ಸ್ಥಿತಿಯನ್ನು ಅವರು ಅರ್ಥೈಸಿಕೊಳ್ಳುತ್ತಾರೆಂಬ ನಂಬಿಕೆಯಿದೆ ಎಂದು ಇದೇ ವೇಳೆ ದತ್ತ ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದೇನೆ ಎಂದರು.