ಕಲಬುರ್ಗಿ, ಜ 05 ( DaijiworldNews/MS): ಬಿಜೆಪಿ ಎಂದರೆ ಬ್ರೋಕರ್ಸ್ ಜನತಾ ಪಕ್ಷ. ಇವರು ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ. ವಿಧಾನಸೌಧ ತನ್ನ ಪಾವಿತ್ರ್ಯತೆ, ವೈಭವ ಕಳೆದುಕೊಂಡು, ವಿಶ್ವದ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಆಗಿದೆ. ಬಿಜೆಪಿ ಸರ್ಕಾರ ಬಂದ ನಂತರ ನಮ್ಮ ರಾಜ್ಯದ ಸರ್ಕಾರಕ್ಕೆ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಕಳಂಕ ಬಂದಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, "ಕಳೆದ ಎರಡು ದಿನಗಳಿಂದ ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರದ ವಿಚಾರವಾಗಿ ಬಹಳ ಚರ್ಚೆಯಾಗುತ್ತಿದೆ. ಈ ಹಿಂದೆ ನಮ್ಮ ರಾಜ್ಯ ತನ್ನ ಪ್ರಗತಿಪರ ಆಲೋಚನೆ, ಆರ್ಥಿಕ ನೀತಿ, ನಮ್ಮ ಆಡಳಿತದಿಂದ ದೇಶದಲ್ಲೇ ಮಾದರಿ ರಾಜ್ಯವಾಗಿ ಹೆಸರು ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ನಮ್ಮ ರಾಜ್ಯ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಕಳಂಕ ಬಂದಿದೆ. ಯಡಿಯೂರಪ್ಪನವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಔಟ್ ಲುಕ್ ಮ್ಯಾಗಜೀನ್ ನಲ್ಲಿ ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯ ಎಂಬ ಲೇಖನ ಬರೆದಿದ್ದರು. ಈಗ ಅದನ್ನೂ ಮೀರಿಸುವಂತೆ 40% ಸರ್ಕಾರ ಎಂಬ ಬಿರುದು ಬಂದಿದೆ ಎಂದು ಆರೋಪಿಸಿದ್ದಾರೆ
ಕಳೆದ ಕೆಲ ದಿನಗಳಿಂದ ಕೆಲವು ಆಡಿಯೋಗಳು ವೈರಲ್ ಆಗುತ್ತಿದ್ದು, ಅದನ್ನು ಆಡಳಿತ ಪಕ್ಷದವರು ನಿರಾಕರಿಸುತ್ತಿಲ್ಲ. ಬಿಜೆಪಿ ಎಂದರೆ ಬ್ಕೋಕರ್ಸ್ ಜನತಾ ಪಕ್ಷ. ಇವರು ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ. ವಿಧಾನಸೌಧ ತನ್ನ ಪಾವಿತ್ರ್ಯತೆ, ವೈಭವ ಕಳೆದುಕೊಂಡು, ವಿಶ್ವದ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಆಗಿದೆ. ಇಲ್ಲಿ ಜನ ಪೋಸ್ಟಿಂಗ್ ಗಳು, ವರ್ಗಾವಣೆ, ಬೇರೆ ಇಲಾಖೆಗಳ ಕಾಮಗಾರಿ, ಉದ್ಯೋಗ ಖರೀದಿ ಮಾಡಬಹುದು. ಪಿಎಸ್ಐ, ಎಇಇ, ಜೆಇಇ, ಸಹಾಯಕ ಪ್ರಾಧ್ಯಾಪಕ ಹುದ್ದೆ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಗಳು ಬೇಕಿದ್ದರೂ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ
ಬಹಳ ಪ್ರಮುಖ ವಿಚಾರ ಎಂದರೆ ರಾಜ್ಯದ ಅತ್ಯುತ್ತಮ ಸೇಲ್ಸ್ ಮನ್ ಆಗಿ ಉನ್ನತ ಮಟ್ಟದ ಅಧಿಕಾರಿಗಳು, ಮಂತ್ರಿಗಳು ಹಾಗೂ ಬ್ರೋಕರ್ ಜನತಾ ಪಕ್ಷದ ಶಾಸಕರು ಇದ್ದಾರೆ. ಕೆಲ ತಿಂಗಳ ಹಿಂದೆ ಸುದ್ದಿ ವಾಹಿನಿಗಳಲ್ಲಿ, ಬಿಜೆಪಿ ಶಾಸಕರೊಬ್ಬರು ವಿಧಾನಸೌಧ ಎದುರು ಶಾಸಕರ ಭವನದಲ್ಲಿ ಪಿಎಸ್ಐ ಹುದ್ದೆ ಮಾರಾಟಕ್ಕೆ ಸಂಧಾನ ಮಾಡಿದ್ದಾಗಿ ಒಪ್ಪಿಕೊಂಡಿದ್ದು ವರದಿಯಾಗಿದೆ. ಇದೇ ರೀತಿ ಜ.4ರಂದು ಪಿಡಬ್ಲ್ಯೂ ಇಲಾಖೆ ಒಬ್ಬ ಕಿರಿಯ ಇಂಜಿನಿಯರ್ 10.5 ಲಕ್ಷ ಹಣದ ಜತೆ ಸಿಕ್ಕಿಬಿದ್ದಿದ್ದಾರೆ. ಜೆಇಇ ಬಳಿ ಇಷ್ಟು ದೊಡ್ಡ ಮೊತ್ತ ಹೇಗೆ ಬಂತು, ಅದನ್ನು ಇಷ್ಟು ಧೈರ್ಯವಾಗಿ ವಿಧಾನಸೌಧದ ಒಳಗೆ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ? ಅದನ್ನು ಯಾವ ಅಧಿಕಾರಿ, ಮಂತ್ರಿಗಳಿಗೆ ಕೊಡಲು ಹೋಗಿದ್ದರು. ಇದು ತನಿಖೆ ಆಗಬೇಕಲ್ಲವೇ? ಎಂದು ಒತ್ತಾಯಿಸಿದ್ದಾರೆ.