ನವದೆಹಲಿ, ಜ 06 (DaijiworldNews/DB): ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಸಂತ್ರಸ್ತೆಗೆ ಕ್ಷಮೆ ಯಾಚಿಸಿದ್ದು, ತನ್ನ ವಿರುದ್ದ ದೂರು ನೀಡದಂತೆ ಆಕೆಯಲ್ಲಿ ಬೇಡಿಕೊಂಡಿದ್ದ ಎಂಬುದಾಗಿ ವರದಿಯಾಗಿದೆ.
ನವೆಂಬರ್ 26ರಂದು ನಡೆದ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. ಇದೇ ವೇಳೆ ಸಂತ್ರಸ್ತೆಯೊಂದಿಗೆ ಆರೋಪಿಯು ದೂರು ನೀಡದಂತೆ ಮನವಿ ಮಾಡಿದ್ದಾನೆ ಎಂದೂ ಹೇಳಲಾಗುತ್ತಿದೆ. ಪತ್ನಿ ಮತ್ತು ಮಗುವಿಗೆ ತೊಂದರೆಯಾಗುತ್ತದೆ. ಹೀಗಾಗಿ ದಯವಿಟ್ಟು ಪೊಲೀಸರಿಗೆ ದೂರು ನೀಡಬೇಡಿ ಎಂಬುದಾಗಿ ಆತ ಅವಲತ್ತುಕೊಂಡಿದ್ದಾನೆ ಎಂದು ಮಹಿಳೆ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ವಿಮಾನದಲ್ಲಿ ತನ್ನ ಸೀಟ್ನಲ್ಲಿ ಕುಳಿತಿದ್ದ ಹಿರಿಯ ಮಹಿಳೆ ಬಳಿ ಹೋಗಿ ಪುರುಷ ಪ್ರಯಾಣಿಕ ಆಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ತನಗೆ ಇಷ್ಟವಿಲ್ಲದಿದ್ದರೂ, ಏರ್ಲೈನ್ ಸಿಬಂದಿ ಆತನೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಹೇಳಿದ್ದರು. ಇದು ನನಗೆ ದಿಗ್ಭ್ರಮೆ ಉಂಟು ಮಾಡಿತ್ತು ಎಂದು ಮಹಿಳೆ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ತನ್ನ ಪಕ್ಕದಲ್ಲಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿ ಆಚೆ ಹೋಗುವಂತೆ ಹೇಳುವವರೆಗೂ ಆತ ನನ್ನ ಬಳಿಯೇ ನಿಂತಿದ್ದ. ಆತ ಹೋದ ಕೂಡಲೇ ನಾನು ಕೂಡಲೇ ಏರ್ಲೈನ್ಸ್ ಸಿಬಂದಿಗೆ ವಿಚಾರ ತಿಳಿಸಿದೆ. ನನ್ನ ಬಟ್ಟೆ, ಶೂ, ಬ್ಯಾಗ್ ಮೂತ್ರದಲ್ಲಿ ತೊಯ್ದಿದ್ದವು. ಬ್ಯಾಗ್ನಲ್ಲಿ ಪಾಸ್ಪೋರ್ಟ್, ಪ್ರಯಾಣ ದಾಖಲೆಗಳು, ಕರೆನ್ಸಿಗಳಿದ್ದವು. ಆದರೆ ವಿಮಾನ ಸಿಬಂದಿ ಅವುಗಳನ್ನು ಮುಟ್ಟಲು ನಿರಾಕರಿಸಿದರು. ಬ್ಯಾಗ್ ಮತ್ತು ಶೂಗಳಿಗೆ ಸೋಂಕು ನಿವಾರಕ ಸಿಂಪಡಿಸಿ ನನ್ನನ್ನು ಬಾತ್ರೂಂಗೆ ಕರೆದೊಯ್ದು ಏರ್ಲೈನ್ ಪೈಜಾಮ ಮತ್ತು ಸಾಕ್ಸ್ಗಳನ್ನು ನೀಡಿದರು ಎಂದವರು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ನಡೆದ ಬಳಿಕ ಸೀಟ್ ಬದಲಾಯಿಸುವಂತೆ ಸಿಬಂದಿಗೆ ಕೇಳಿದರೆ ಅವರು ಬೇರೆ ಸೀಟು ಲಭ್ಯವಿಲ್ಲ ಎಂದರು. ಆದರೆ ನನ್ನ ಕಷ್ಟ ಅರಿತ ಬ್ಯುಸಿನೆಸ್ ದರ್ಜೆಯ ಸೀಟಿನಲ್ಲಿದ್ದ ಪ್ರಯಾಣಿಕರೊಬ್ಬರು ಪ್ರಥಮ ದರ್ಜೆ ಸೀಟುಗಳು ಲಭ್ಯವಿವೆ ಎಂಬುದಾಗಿ ಹೇಳಿದರು. ಸುಮಾರು 20 ನಿಮಿಷಗಳ ಕಾಲ ನಿಂತೇ ಇದ್ದೆ. ಆ ಬಳಿಕ ಸಿಬಂದಿ ಬಳಸುವ ಸಣ್ಣ ಆಸನವೊಂದನ್ನು ನನಗೆ ನೀಡಲಾಯಿತು. ಎರಡು ಗಂಟೆ ಬಳಿಕ ನನ್ನ ಸ್ವಂತ ಆಸನಕ್ಕೆ ಹಿಂತಿರುಗಲು ಹೇಳಿದರು. ಆದರೆ ನಾನು ನಿರಾಕರಿಸಿದ ಕಾರಣಕ್ಕಾಗಿ ಬೇರೆ ಸೀಟ್ನ್ನು ನೀಡಿದರು ಎಂದು ಸಂತ್ರಸ್ತ ಮಹಿಳೆ ಎಫ್ಐಆರ್ನಲ್ಲಿ ಹೇಳಿದ್ದಾರೆ.
ಇದಾದ ಬಳಿಕ ಆರೋಪಿಯು ನನ್ನೊಂದಿಗೆ ಕ್ಷಮೆ ಯಾಚಿಸಲು ಬಯಸುತ್ತಿರುವುದಾಗಿ ಸಿಬಂದಿ ಹೇಳಿದರು. ಆದರೆ ಆತನ ಮುಖ ನೋಡಲು ನಾನು ಬಯಸುವುದಿಲ್ಲ, ಅವನನ್ನು ಬಂಧಿಸಬೇಕೆಂದು ಹೇಳಿದ್ದೆ. ಆದಾಗ್ಯೂ ನನ್ನ ಇಚ್ಚೆಗೆ ವಿರುದ್ದವಾಗಿ ಆತನನ್ನು ನನ್ನ ಮುಂದೆ ಕರೆ ತಂದು ಕುಳ್ಳಿರಿಸಿದರು. ಆತ ಅಳಲು ಪ್ರಾರಂಭಿಸಿದ ಮತ್ತು ಕ್ಷಮೆ ಯಾಚಿಸಿದ. ದೂರು ದಾಖಲಿಸಬೇಡಿ ಎಂದು ಬೇಡಿದ. ದೂರು ದಾಖಲಿಸಿದರೆ ಪತ್ನಿ ಮತ್ತು ಮಗುವಿಗೆ ತೊಂದರೆಯಾಗುತ್ತದೆ ಎಂದು ಬೇಡಿಕೊಂಡ ಎಂದೂ ಎಫ್ಐಆರ್ನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
ಇದೀಗ ಆರೋಪಿ ದೇಶದಿಂದ ಪರಾರಿಯಾಗದಂತೆ ಲುಕ್ಔಟ್ ನೋಟಿಸ್ ಹೊರಡಿಸಲಾಗಿದ್ದು, ಆತನ ಬಂಧನಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ವಿವಿಧ ಸೆಕ್ಷನ್ಗಳಡಿಯಲ್ಲಿ ಆರೋಪಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.