ಕಾನ್ಪುರ(ಉತ್ತರ ಪ್ರದೇಶ), ಜ 06 (DaijiworldNews/DB): ಉತ್ತರ ಪ್ರದೇಶದ ಕಾನ್ಪುರದಲ್ಲಿ ಶೀತಗಾಳಿಯ ಪ್ರಭಾವ ಮುಂದುವರಿದಿದ್ದು, ಜನರ ಜೀವಕ್ಕೇ ಸಂಕಷ್ಟ ತಂದೊಡ್ಡಿದೆ. ಶೀತಗಾಳಿಯಿಂದಾಗಿ ಸುಮಾರು 25 ಮಂದಿ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್ಗೊಳಗಾಗಿ ಸಾವನ್ನಪ್ಪಿದ್ದಾರೆ.
ತೀವ್ರವಾಗಿ ಕಾಡುತ್ತಿರುವ ಶೀತದಿಂದಾಗಿ ರಕ್ತ ಹೆಪ್ಪುಗಟ್ಟುವುದು, ರಕ್ತದೊತ್ತಡ ಏರಿಕೆಯಾಗುತ್ತಿರುವ ಕಾರಣ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್ ಸಂಭವಿಸುತ್ತಿದೆ. ಸುಮಾರು 25 ಮಂದಿ ಗುರುವಾರದವರೆಗೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
723 ಹೃದ್ರೋಗಿಗಳು ತುರ್ತು ಮತ್ತು ಒಪಿಡಿಗೆ ಗುರುವಾರ ಆಗಮಿಸಿದ್ದಾರೆ. ಈ ಪೈಕಿ 41 ಮಂದಿಯ ಸ್ಥಿತಿ ಗಂಭೀರವಾಗಿದೆ. ಚಿಂತಾಜನಕವಾಗಿದ್ದ ಏಳು ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಅತಿಯಾದ ಶೀತ ವಾತಾವರಣ ಜನರಿಗೆ ಪ್ರತಿಕೂಲವಾಗಿ ಪರಿಣಮಿಸುತ್ತಿದೆ. ವಯಸ್ಸಾದವರಿಗಷ್ಟೇ ಅಲ್ಲದೆ, ಹದಿಹರೆಯದವರು, ಯುವಕರಿಗೂ ಹೃದಯಾಘಾತದಂತಹ ಸಮಸ್ಯೆಗಳಿಗೆ ಈ ವಾತಾವರಣ ಕಾರಣವಾಗುತ್ತಿದೆ ಎಂದು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು ಹೇಳಿದ್ದಾರೆ.