ನವದೆಹಲಿ, ಜ 06 (DaijiworldNews/DB): ಕ್ಯಾನ್ಸರ್ನಿಂದ ಬಳಲಿ ಸಾವನ್ನಪ್ಪಿದ ಆರು ವರ್ಷದ ಪುಟ್ಟ ಬಾಲಕನೊಬ್ಬನ ಕರುಣಾಜನಕ ಕತೆಯನ್ನು ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಬಾಲಕನ ನೋವಿಗೆ ಹಲವರು ಕಣ್ಣೀರಾಗಿದ್ದಾರೆ.
ಕ್ಯಾನ್ಸರ್ ತಜ್ಞ ಡಾ ಸುಧೀರ್ ಕುಮಾರ್ ಅವರು ತಾವು ಚಿಕಿತ್ಸೆ ನೀಡಿದ ಬಾಲಕನ ಅಂತರಾಳವನ್ನು ಬಿಚ್ಚಿಟ್ಟಿದ್ದಾರೆ. ಕ್ಯಾನ್ಸರ್ ರೋಗದ ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಬಾಲಕನನ್ನು ಪೋಷಕರು ಕರೆದೊಯ್ಯುತ್ತಾರೆ. ಈ ವೇಳೆ ಬಾಲಕ ವೈದ್ಯರಲ್ಲಿ ಡಾಕ್ಟರ್ ನನಗೆ ಗ್ರೇಡ್ 4 ಕ್ಯಾನ್ಸರ್ ಇರುವುದರಿಂದ ಹೆಚ್ಚೆಂದರೆ ಆರು ತಿಂಗಳು ಬದುಕಬಲ್ಲೆ ಎಂಬುದು ಗೊತ್ತು. ಆದರೆ ನನ್ನ ಪೋಷಕರಿಗೆ ಈ ವಿಷಯವನ್ನು ಹೇಳಬೇಡಿ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅವರಿಗೆ ಗೊತ್ತಾದರೆ ನೋವನುಭವಿಸುತ್ತಾರೆ ಎಂದು ಹೇಳಿದ್ದಾನೆ.
ಬಾಲಕನ ಮಾತಿಗೆ ತಲೆಯಾಡಿಸಲೇಬೇಕಾಯಿತು ಎಂದು ವೈದ್ಯರು ಬರೆದುಕೊಂಡಿದ್ದಾರೆ. ಯಾಕೆಂದರೆ ಆತನ ಹೆತ್ತವರೂ ಇದೇ ಮಾತನ್ನು ನನ್ನ ಬಳಿ ಹೇಳಿದ್ದರು. ವೈದ್ಯರೇ ಮಗನಿಗೆ ಈ ವಿಚಾರವನ್ನು ತಿಳಿಸಬೇಡಿ, ಅವನು ನೊಂದುಕೊಳ್ಳುತ್ತಾನೆಂದು ಆತನ ಪೋಷಕರು ಈ ಮೊದಲೇ ನನಗೆ ತಿಳಿಸಿದ್ದರು. ಹೆತ್ತವರಿಗೂ, ಬಾಲಕನಿಗೂ ಕ್ಯಾನ್ಸರ್ ಬಗ್ಗೆ ತಿಳಿದಿದ್ದರೂ, ಪರಸ್ಪರ ತಿಳಿಯದಂತೆ ನಟಿಸಿದ್ದರು. ಇಂತಹ ಸಂದರ್ಭವನ್ನು ನಿಭಾಯಿಸುವಾಗ ವೈದ್ಯನ ಆಂತರ್ಯದ ಸನ್ನಿವೇಶಕ್ಕೂ ಸವಾಲಾಗುತ್ತದೆ ಎನ್ನುತ್ತಾರೆ ವೈದ್ಯ ಡಾ. ಸುಧೀರ್ಕುಮಾರ್.
ಆರು ತಿಂಗಳು ಮಾತ್ರ ಬದುಕುತ್ತಿದ್ದೇನೆ ಎಂದಿದ್ದ ಬಾಲಕ ಎಂಟು ತಿಂಗಳು ಬದುಕಿದ್ದ. ಬದುಕಿರುವವರೆಗೂ ಆತ ಖುಷಿಯಾಗಿಯೇ ಇದ್ದ. ಆತ್ಮವಿಶ್ವಾಸದಿಂದಲೇ ನಗುತ್ತಿದ್ದ ಎನ್ನುತ್ತಾರೆ ವೈದ್ಯರು. ಇನ್ನು ಈತನನ್ನು ನೋಡಿಕೊಳ್ಳಲೆಂದೇ ಈತನ ಹೆತ್ತವರು ಕೆಲಸ ತೊರೆದಿದ್ದರು ಎಂಬುದಾಗಿ ಭಾವುಕ ಟ್ವೀಟ್ ಮಾಡಿದ್ದಾರೆ ವೈದ್ಯ ಸುಧೀರ್ಕುಮಾರ್.