ಚಿತ್ರದುರ್ಗ, ಜ 05 ( DaijiworldNews/MS): ಇತರೆ ಸಮುದಾಯಗಳಿಗೆ ಅನ್ಯಾಯವಾಗದಂತೆ, ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಂವಿಧಾನದ ಚೌಕಟ್ಟಿನಲ್ಲಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಚಿತ್ರದುರ್ಗದಲ್ಲಿ ನಡೆದ ಮಡಿವಾಳ ಮಠದ 14ನೇ ವಾರ್ಷಿಕೋತ್ಸವ, ಪೀಠಾಧಿಪತಿ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಅವರ 24ನೇ ಜಂಗಮದೀಕ್ಷೆ, 39ನೇ ಜನ್ಮದಿನದ ಅಂಗವಾಗಿ ನಗರದ ಮಡಿವಾಳ ಮಾಚಿದೇವ ಗುರುಪೀಠದಲ್ಲಿ ಆಯೋಜಿಸಿರುವ 2 ದಿನಗಳ ಕಾಯಕ ಜನೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಈ ಬೇಡಿಕೆಯನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಕಾನೂನಾತ್ಮಕ ಪರಿಶೀಲನೆ:
ಈ ಸಮಾಜವನ್ನು ಗುರುತಿಸಿದ್ದು ಬಿ.ಎಸ್.ಯಡಿಯೂರಪ್ಪನವರು. ರಾಜಕೀಯವಾಗಿ ಈ ಸಮುದಾಯವನ್ನು ಗುರುತಿಸಿ, ಸಮಾಜವನ್ನು ಭೀಷ್ಮರಂತೆ ಮುನ್ನಡೆಸುತ್ತಿದ್ದಾರೆ. ಸರ್ಕಾರಕ್ಕೆ ಕೂಡ ಸಮುದಾಯದ ಬಗ್ಗೆ ಕಾಳಜಿ ಇದೆ. ಸಂವಿಧಾನದ ಚೌಕಟ್ಟಿನಲ್ಲಿ ಈ ಸಮುದಾಯದ ಬಹು ದಿನಗಳ ಬೇಡಿಕೆಯ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಏಳೆಂಟು ವರ್ಷ ಯಾರೂ ಏನೂ ಮಾಡಿಲ್ಲ. ಕಾನೂನಾತ್ಮಕವಾಗಿ ಸಂಪೂರ್ಣವಾಗಿ ಪರಿಶೀಲಿಸಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಾಗುವುದು. ಸಮುದಾಯದವರು ಸಂಘಟಿತರಾಗಿ ಸ್ವಚ್ಛತೆಯನ್ನು ಪಡೆದುಕೊಂಡು ಸ್ವಾಭಿಮಾನದ ಬದುಕು ಬದುಕಲು ಕ್ರಮ ಕೈಗೊಳ್ಳಾಗುವುದು. ಸರ್ಕಾರ ಈಗಾಗಲೇ ಕಾಯಕ ಯೋಜನೆಯನ್ನು ರೂಪಿಸಿದೆ. ಅನುದಾನವನ್ನು ಇದೇ ವರ್ಷ ಬಿಡುಗಡೆ ಮಾಡಲಾಗುವುದು. ಮಕ್ಕಳಿಗೆ ವಿದ್ಯಾಭ್ಯಾಕ್ಕೆ ಸ್ವಯಂ ಉದ್ಯೋಗಕ್ಕೆ ಅವಕಾಶಗಳನ್ನು ನೀಡಲಾಗಿದೆ. ಇದನ್ನು ಬಳಸಿಕೊಂಡು ಮುಂದೆ ಬರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.