ಬೆಂಗಳೂರು, ಜ 04 ( DaijiworldNews/MS): ವಿಧಾನಸೌಧದಿಂದ ಹಿಡಿದು ಗ್ರಾಮಪಂಚಾಯ್ತಿವರೆಗೂ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಗೋಡೆ ಮುಟ್ಟಿದರೆ ಸಾಕು ಕಾಸು, ಕಾಸು ಎನ್ನುವ ಶಬ್ದ ಬರುತ್ತದೆ ಎಂದು ನಾನು ಈಗಾಗಲೇ ಹೇಳಿದ್ದೇನೆ. ಯಾವುದೇ ಕಾಮಗಾರಿ ಬಿಲ್ ಪಾವತಿ ಆಗಬೇಕಾದರೆ ಕಮಿಷನ್ ನೀಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಈಶ್ವರಪ್ಪ ರಾಜೀನಾಮೆ ಪ್ರಕರಣದಿಂದ ಗುತ್ತಿಗೆದಾರರ ಆತ್ಮಹತ್ಯೆವರೆಗೂ ಎಲ್ಲ ಪ್ರಕರಣಗಳಲ್ಲೂ ಕಮಿಷನ್ ತಾಂಡವವಾಡುತ್ತಿದೆ ಎಂದು ಹೇಳಿದ್ದಾರೆ.
ವಿಧಾನಸೌಧದ ಅಧಿಕಾರಿಗಳಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರಿಗೂ ಹಣ ನೀಡಬೇಕು. ಇಡೀ ದೇಶದಲ್ಲಿ ಕರ್ನಾಟಕದ್ದು ಅತ್ಯಂತ ಭ್ರಷ್ಟ ಸರಕಾರ ಎಂಬ ಕಳಂಕ ಬಂದಿದೆ.
ಆದರೆ ಎಲ್ಲ ಪ್ರಕರಣಗಳನ್ನು ಸರ್ಕಾರ ಮುಚ್ಚಿಹಾಕುತ್ತದೆ. ಯಾವುದೇ ಪ್ರಕರಣವನ್ನು ಇ.ಡಿ.ಗಾಗಲಿ, ಬೇರೆ ತನಿಖೆಗಾಗಲಿ ವಹಿಸುವುದಿಲ್ಲ. ಮಂತ್ರಿಗಳು, ಶಾಸಕರ ಮೇಲೆ ಎಫ್ಐಆರ್ ದಾಖಲಾದರೂ ಅವುಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗುತ್ತಿದೆ. ಬೇರೆಯವರ ಮೇಲಾದರೆ ಆರೋಪಪಟ್ಟಿ ಸಲ್ಲಿಸಿ ಪ್ರಕರಣ ದಾಖಲಿಸುತ್ತಾರೆ. ಎಲ್ಲವೂ ವಿಧಾನಸೌಧದಲ್ಲೇ ಸೆಟ್ಲಮೆಂಟ್ ಆಗುತ್ತದೆ. ಇದು ಸರ್ಕಾರದ ನಿಜವಾದ ಮುಖ ಎಂದು ಆರೋಪಿಸಿದ್ದಾರೆ.