ಬೆಂಗಳೂರು, ಜ 04 ( DaijiworldNews/MS): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ನಾನಾ ತಂತ್ರಗಳನ್ನು ಅನುಸರಿಸುತ್ತಿದೆ. ಮುಂಬರುವ ಈಗಾಗಲೇ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿರುವ ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಗಳ್ಯಾರು ಎಂಬ ಲೆಕ್ಕಾಚಾರದಲ್ಲಿ ಅಳೆದುತೂಗಿ ಟಿಕೆಟ್ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಮೂರು ಸೂತ್ರವನ್ನು ಸಿದ್ದಪಡಿಸಿಕೊಂಡಿದೆ.
ಎಲ್ಲ ಹಾಲಿ ಶಾಸಕರು ಮತ್ತು ಈ ಹಿಂದಿನ ಕೊನೆ ಚುನಾವಣೆಯಲ್ಲಿ 5 ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಸೋಲುಂಡವರಿಗೆ, ಕ್ಷೇತ್ರವಾರು ನಡೆಸಿದ ಸರ್ವೆಯಲ್ಲಿ ಮತದಾರರ ಒಲವು ಗಳಿಸಿ ಗೆಲ್ಲುವ ಅಭ್ಯರ್ಥಿ ಗುರುತಿಸಿಕೊಂಡವರಿಗೆ, ನಿರ್ದಿಷ್ಟ ಕ್ಷೇತ್ರಗಳಲ್ಲಿ ವರ್ಚಸ್ಸು, ಸಾಮರ್ಥ್ಯ ಮತ್ತು ಮತದಾರರ ಮೇಲೆ ಪ್ರಭಾವ ಬೀರಬಲ್ಲವರಿಗೆ ಟಿಕೆಟ್ ಎಂಬ ಮೂರು ಸೂತ್ರಗಳನ್ನು ಪಾಲಿಸಿ ಟಿಕೆಟ್ ಹಂಚಿಕೆ ಮಾಡಲು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.
ಈ ಬಾರಿ ಕಾಂಗ್ರೆಸ್ ರಾಜ್ಯ ನಾಯಕರು ಶತಾಯಗತಾಯ ಪಕ್ಷ ಗೆಲುವು ಸಾಧಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದು, ಹೀಗಾಗಿ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ಯಾತ್ರೆ ನಡೆಸಲು ಸಿದ್ದರಾಗಿದ್ದಾರೆ. ಅಲ್ಲದೆ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ.
ಇನ್ನು ರಾಜ್ಯ ನಾಯಕರು ಜನವರಿ ಕೊನೆಯ ವಾರದಲ್ಲಿ 120ರಿಂದ 150 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಮೊದಲ ಪಟ್ಟಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ.