ನವದೆಹಲಿ, ಜ 05 (DaijiworldNews/DB): ಜನವರಿ 1ರಂದು ದೆಹಲಿಯಲ್ಲಿ ನಡೆದ ಭೀಕರ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ ಅಂಜಲಿಕುಮಾರಿ ಅವರ ಮರಣೋತ್ತರ ಪರೀಕ್ಷೆಯಲ್ಲಿ ಹಲವು ಆಘಾತಕಾರಿ ಅಂಶಗಳು ಬಹಿರಂಗಗೊಂಡಿವೆ. ಮೃತದೇಹದಿಂದ ತಲೆಬುರುಡೆ ಸಂಪೂರ್ಣ ಮುರಿದು ಆಕೆಯ ಮೆದುಳು ಹೊರ ಬಂದಿತ್ತು ಎಂದು ವರದಿ ಹೇಳಿದೆ.
ಅಂಜಲಿ ಮೃತದೇಹದಲ್ಲಿ ಕನಿಷ್ಠ 40 ಬಾಹ್ಯ ಗಾಯಗಳಿವೆ. ಅಲ್ಲದೆ ಆಕೆಯ ತಲೆಬುರುಡೆ ಸಂಪೂರ್ಣವಾಗಿ ಮುರಿದು ಹೋಗಿ ಮೆದುಳು ಹೊರ ಬಂದಿತ್ತು. ಪಕ್ಕೆಲುಬುಗಳು, ಎರಡೂ ಕೈ, ಕಾಲುಗಳು ಮುರಿದಿದ್ದವು. ಹಣೆಯ ಮೇಲೆ ಆಳವಾದ ಗಾಯಗಳಾಗಿತ್ತು ಎಂದು ವರದಿ ಹೇಳಿದೆ.
ಇನ್ನು ಆಕೆ ಸಂಚರಿಸುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದು ಸುಮಾರು 12 ಕಿಲೋ ಮೀಟರ್ ದೂರ ಎಳೆದೊಯ್ದ ಬಲೆನೊ ಕಾರಿನ ಎಡ ಮುಂಭಾಗದ ಚಕ್ರದ ಕೆಳಗೆ ರಕ್ತದ ಕಲೆಗಳು ಕಂಡು ಬಂದಿವೆ. ಹೀಗಾಗಿ ಯುವತಿ ಕಾರಿನ ಚಕ್ರಕ್ಕೆ ಸಿಲುಕಿಕೊಂಡಿದ್ದರು ಎಂಬುದು ವಿಧಿ ವಿಜ್ಞಾನ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ. ಕಾಲುಗಳು ಕೂಡಾ ಚಕ್ರದಡಿ ಸಿಲುಕಿಕೊಂಡಂತೆ ತೋರುತ್ತಿದೆ ಎಂದು ಹಿರಿಯ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಲೈಂಗಿಕ ದೌರ್ಜನ್ಯ ನಡೆದಿರುವ ಸಾಕ್ಷ್ಯಗಳು ಯಾವುದೂ ಕಂಡು ಬಂದಿಲ್ಲ. ಅಂತಹ ಗಾಯಗಳಾವುದೂ ಆಕೆಯ ದೇಹದಲ್ಲಿ ಇರಲಿಲ್ಲ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ಸಾಗರ್ ಪ್ರೀತ್ ಹೇಳಿದ್ದಾರೆ.