ನವದೆಹಲಿ, ಜ 05 (DaijiworldNews/HR): ಗೃಹ ಸಚಿವ ಅಮಿತ್ ಶಾ ಅವರು ತ್ರಿಪುರದ ಅಗರ್ತಲಕ್ಕೆ ಹೊರಟಿದ್ದು, ಮಾರ್ಗ ಮಧ್ಯೆ ಅಸ್ಸಾಂನ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ ತುರ್ತು ಭೂಸ್ಪರ್ಶ ಮಾಡಿದೆ.
ಅಮಿತ್ ಶಾ ಅವರು ಬುಧವಾರ ಅಗರ್ತಲಕ್ಕೆ ತಲುಪಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ರಾತ್ರಿ 10.45ರ ಹೊತ್ತಿಗೆ ಗುವಾಹಟಿಯ ಹೋಟೆಲ್ ರಾಡಿಸನ್ ಬ್ಲೂ ನಲ್ಲಿ ಉಳಿದುಕೊಂಡಿದ್ದು, ಇಂದು ಬೆಳಗ್ಗೆ ಅವರು ಅಗರ್ತಲಕ್ಕೆ ತೆರಳಲಿದ್ದಾರೆ.
ಇನ್ನು ತ್ರಿಪುರದಲ್ಲಿ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಹಿನ್ನೆಲೆಯಲ್ಲಿ ಬಿಜೆಪಿ ರಥಯಾತ್ರೆಗೆ ಚಾಲನೆ ಕೊಡಲು ಅಮಿತ್ ಶಾ ಅಗರ್ತಲಕ್ಕೆ ತೆರಳುತ್ತಿದ್ದರು. ಆದರೆ ಅತ್ಯಂತ ಕೆಟ್ಟ ವಾತಾವರಣ ಇದ್ದ ಕಾರಣ ವಿಮಾನ ಹಾರಾಟ ಮುಂದುವರಿಸಲು ಸಾಧ್ಯವಾಗಲಿಲ್ಲ.