ಹಾವೇರಿ, ಜ. 04 ( DaijiworldNews/SM): ಯಾಲಕ್ಕಿ ಕಂಪಿನ ನಗರಿಯಲ್ಲಿ ಈಗ ಕನ್ನಡದ ಕಂಪು. ದಾಸ ಶ್ರೇಷ್ಠರ ನಾಡು ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡದ ಅಭಿಮಾನಿಯೊಬ್ಬ ಹ್ಯಾಂಡಲ್ ಇಲ್ಲದ ಬೈಕ್ ರೈಡ್ ಮಾಡಿಕೊಂಡು ಆಗಮಿಸಿದ್ದಾರೆ. ಬಾಲಗಕೋಟೆಯಿಂದ ಹಾವೇರಿವರೆಗೆ ಸುಮಾರು 360 ಕಿಮೀ ಆಗಮಿಸಿದ್ದಾರೆ. ಕನ್ನಡ ನಾಡು-ನುಡಿ, ಜಾಗೃತಿಗಾಗಿ ಹ್ಯಾಂಡಲ್ ಇಲ್ಲದ ಬೈಕ್ ಚಲಾಯಿಸಿದ ಸಾಹಿತ್ಯ ಅಭಿಮಾನಿ ಈರಣ್ಣಾ ಕುಂದರಗಿಮಠ.
ಈರಣ್ಣ ಕುಂದರಗಿಮಠ ಮೂಲತಃ ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ನಿವಾಸಿ. ಈರಣ್ಣ ಕಳೆದ 15 ವರ್ಷಗಳಿಂದ ಹ್ಯಾಂಡಲ್ ಇಲ್ಲದ ಬೈಕ್ ಓಡಿಸುತ್ತಿದ್ದಾರೆ. ಈ ಸಾಹಸಿ 86 ನೇ ಅಖಿಲ ಭಾರತ ಕನ್ನಡದ ಸಾಹಿತ್ಯ ಸಮ್ಮೇಳನಕ್ಕೆ ಬಾಗಲಕೋಟೆಯಿಂದ ಹಾವೇರಿಗೆ ಸುಮಾರು 360 ಕಿಮೀ ದೂರವನ್ನು ಹ್ಯಾಂಡಲ್ ಇಲ್ಲದ ಬೈಕ್ನ್ನು ಓಡಿಸಿಕೊಂಡು ಆಗಮಿಸಿದ್ದಾರೆ. ಬೈಕ್ನಲ್ಲಿ ನಾಡು, ನುಡಿ, ಜಾಗೃತಿಯ ನುಡಿಮುತ್ತುಗಳು ಹಾಗೂ ಕನ್ನಡದ ಬಾವುಟ ಹಿಡಿದು ಸಾಹಿತ್ಯ ಅಭಿಮಾನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹಾವೇರಿಯ ಜನರು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ನಿನ್ನೆ (ಜ.3) ಹ್ಯಾಂಡಲ್ ಇಲ್ಲದೆ ಬೈಕ್ ಸಾಹಸ ಪ್ರಾರಂಭ ಮಾಡಿ, ಶಿರೂರು, ಗಜೇಂದ್ರಗಡ, ನರೆಗಲ್, ಗದಗ, ಹುಬ್ಬಳ್ಳಿ ಮಾರ್ಗವಾಗಿ ಏಲಕ್ಕಿ ನಾಡಿಗೆ ಆಗಮಿಸಿದ್ದಾರೆ. ಬೈಕ್ಗೆ ಹ್ಯಾಂಡಲ್ ಇಲ್ಲ. ಹ್ಯಾಂಡಲ್ ಇಲ್ಲದೆ ಈ ಬೈಕಿಗೆ ಎಕ್ಸಿಲೇಟರ್, ಬ್ರೇಕ್, ಗೇರ್ ಹಾಕಿಕೊಂಡು ಚಾಲನೆ ಮಾಡುತ್ತಿದ್ದಾರೆ. ಬೈಕ್ನಲ್ಲಿ ಭುವನೇಶ್ವರಿ ಭಾವಚಿತ್ರ, ರಂಭಾಪುರಿ ಶ್ರೀ, ಹಾನಗಲ್ ಕುಮಾರಶ್ರೀಗಳ, ಪುಟ್ಟರಾಜಗವಾಯಿ, ಸಿದ್ದಗಂಗಾ ಶ್ರೀಗಳ ಭಾವಚಿತ್ರ ಹಾಕಿದ್ದು, ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಭಾವಚಿತ್ರಗಳನ್ನು ಅಳವಡಿಸಿಕೊಂಡು ಕನ್ನಡದ ಕಂಪನ್ನು ಸಾರುತ್ತಿದ್ದಾರೆ.